ಸಂಘದ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನ: ಪಯ್ಯಡೆ
Team Udayavani, Aug 27, 2019, 1:32 PM IST
ಮುಂಬಯಿ, ಆ. 26: ಸಂಘದ ಶಿಕ್ಷಣ ಸೇವೆಯನ್ನು ಮುಂಬಯಿ ಉಪನಗರಗಳಿಗೆ ವಿಸ್ತರಿಸುವ ಕಾರ್ಯ ಯೋಜನೆ ಜಾರಿಯಲ್ಲಿದ್ದು, ಮುಂದಿನ ವರ್ಷದ ಅವಧಿಯಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಸಂಘವು ಆರಂಭವಾದ ದಿನದಿಂದ ಶಿಕ್ಷಣಕ್ಕೆ ಪ್ರಾಮುಖ್ಯ ನೀಡುತ್ತಾ ಬಂದಿದ್ದು, ಸಂಘದ ಪೊವಾಯಿ ಶಿಕ್ಷಣ ಸಂಸ್ಥೆ, ಉನ್ನತ ಶಿಕ್ಷಣ ಯೋಜನಾ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಶಿಕ್ಷಣ ಸಂಸ್ಥೆಗಳು ಹೆಸರುವಾಸಿಯಾಗಿರುವುದು ಬಂಟರ ಸಂಘಕ್ಕೆ ಅಭಿಮಾನದ ಸಂಗತಿಯಾಗಿದೆ. ಮುಂದೆ ನೂತನ ಶಿಕ್ಷಣ ಸಂಸ್ಥೆ ಆರಂಭಿಸಲು ಮುಂಡಪ್ಪ ಎಸ್. ಪಯ್ಯಡೆ ಅವರ ಕಾರ್ಯಾಧ್ಯಕ್ಷತೆಯಲ್ಲಿ ನೂತನ ಶಿಕ್ಷಣ ಯೋಜನಾ ಸಮಿತಿಯೊಂದನ್ನು ರಚಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಮುಂಬಯಿ ಪಶ್ಚಿಮ ಅಥವಾ ಉಪನಗರಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಬಗ್ಗೆ ಸ್ಥಳ ಪರಿಶೀಲನೆ ನಡೆಯುತ್ತಿದೆ ಎಂದು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಆ. 25 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಇದರ 91ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಕ್ಕೆ ಬಂಟರ ಮಹಾದಾನಿಗಳ ನೆರವು ಅಭಿನಂದನೀಯವಾಗಿದೆ. ಸಂಘದ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷ ಎನ್. ಸಿ. ಶೆಟ್ಟಿ ಅವರ ಸಮರ್ಥ ನೇತೃತ್ವದಲ್ಲಿ ಒಟ್ಟು ಸುಮಾರು 50 ಸಾವಿರ ಸದಸ್ಯರನ್ನು ಸಂಘಕ್ಕೆ ಪರಿಚಯಿಸುವ ಪ್ರಯತ್ನ ಜಾರಿಯಲ್ಲಿದೆ. ಸಂಘದ ವಿವಾಹ ಸಹಾಯ ಸಮಿತಿಯ ವಧು ವರರ ಚಾವಡಿ ಮೂಲಕ ಹಲವಾರು ವಿವಾಹ ಸಂಬಂಧಗಳನ್ನು ಸುರೇಶ್ ಎನ್. ಶೆಟ್ಟಿ ಅವರ ನೇತೃತ್ವದ ಸಮಿತಿಯು ಕಾರ್ಯಪ್ರವೃತ್ತವಾಗಿದೆ. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ದಾಸ್ ಶೆಟ್ಟಿ ಮತ್ತವರ ತಂಡದ ನೇತೃತ್ವದಲ್ಲಿ ಜರಗಿದ ಮೆಗಾ ಆರ್ಥಿಕ ಸಹಾಯ ಮೇಳ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನಡೆದಿದ್ದು, ಅಧಿಕ ಸಂಖ್ಯೆಯಲ್ಲಿ ಬಂಟ ಬಾಂಧವರಿಗೆ ಸಹಾಯ ನೀಡಿದೆ. ಸಮಾಜಕ್ಕಾಗಿ ತನ್ನ ಜೀವನವನ್ನೇ ಮೀಸಲಿಟ್ಟಿರುವ ಐಕಳ ಹರೀಶ್ ಶೆಟ್ಟಿ ಅವರ ಸಾಧನೆ ಅಪಾರವಾಗಿದೆ. ಸಂಘದ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ ಎಂದು ನುಡಿದು ಸಂಸ್ಥೆಯ ವಾರ್ಷಿಕ ಪ್ರಶಸ್ತಿ, ಸಮ್ಮಾನ, ಬಹುಮಾನಗಳನ್ನು ಪಡೆದ ಎಲ್ಲರನ್ನೂ ಅಭಿನಂದಿಸಿದರು.
ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್. ಹೆಗ್ಡೆ ಅವರು ಮಾತನಾಡಿ, ಪದ್ಮನಾಭ ಎಸ್. ಪಯ್ಯಡೆ ಅವರ ಆಡಳಿತಾತ್ಮಕ ಗುಣ ಮೆಚ್ಚುವಂಥದ್ದು. ಬಿ. ವಿವೇಕ್ ಶೆಟ್ಟಿ ಅವರು ಹೇಳಿದಂತೆ ಡೋನರ್ ಡೇ ಮೂಲಕ ಬಂಟರ ಭವನದ ನೂತನ ನಿರ್ಮಾಣಕ್ಕೆ ಹೆಜ್ಜೆ ಇಡಲು ಸಾಧ್ಯವಾಗಬಹುದು. ಸಂಘದ ಏಳ್ಗೆಯ ಬಗ್ಗೆ ದಾನಿಗಳು ಸದಾ ಸಂಘದೊಂದಿಗಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಸಂತೋಷ್ ಹೆಗ್ಡೆ ಇವರು ಮಾತನಾಡಿ, ಪಬ್ಲಿಕ್ ಸರ್ವಿಸ್ ಕಮಿಷನರ್, ಸಿವಿಲ್ ಸರ್ವಿಸ್, ಯುಪಿಎಸ್ಸಿಗಳಲ್ಲಿ ಬಂಟರು ಕಡಿಮೆ ಪ್ರವೇಶ ಪಡೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕೃಷ್ಣ ಶೆಟ್ಟಿ ಬದ್ಲಾಪುರ, ಮಹಾಬಲ ಶೆಟ್ಟಿ, ಶಂಕರ್ ಹೆಗ್ಡೆ ಇವರು ಮಾತನಾಡಿದರು.
ಸಮಾರಂಭದಲ್ಲಿ ಸಂಘದ ಸದಸ್ಯತ್ವ ಸಂಗ್ರಹ ಚಿನ್ನದ ಪುರಸ್ಕಾರ, ಸಂಘದ ಅತ್ಯುತ್ತಮ ವರ್ಷದ ಕಾರ್ಯಕರ್ತ ಚಿನ್ನದ ಪ್ರಶಸ್ತಿ, ಸಂಘದ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ, ಬಂಟರವಾಣಿ ಮಾಜಿ ಸಂಪಾದಕ ವೈ. ಜಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ, ಶಾಂತಾರಾಮ ಬಿ. ಶೆಟ್ಟಿ ವಾರ್ಷಿಕ ಸಾಹಿತ್ಯ ಪ್ರಶಸ್ತಿ, ರಮಾನಾಥ ಪಯ್ಯಡೆ ಸ್ಮರಣಾರ್ಥ ಸ್ಕಾಲರ್ಶಿಪ್, ಶಂಕರ್ ಶೆಟ್ಟಿ ಸ್ಮರಣಾರ್ಥ ನಗದು ಬಹುಮಾನ, ಡಾ| ಸಂಜೀವ ಶೆಟ್ಟಿ ಸ್ಮರಣಾರ್ಥ ಸಹಾಯಧನ ವಿತರಣೆ, ಕೆ. ಆರ್. ಆಚಾರ್ಯ ಶಿಕ್ಷಣ ಸಹಾಯ ವಿತರಣೆ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ವಾಚಿಸಿದರು. ಎಚ್ಎಸ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ ಮತ್ತು ಸಂಘದ ಜೊತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಇದೇ ಸಂದರ್ಭದಲ್ಲಿ ಸಂಘದ ವಿಶ್ವಸ್ತರು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪ್ರಾದೇಶಿಕ ಸಮನ್ವಯಕರು, ಪ್ರಾದೇಶಿಕ ಕಾರ್ಯಾಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಲೆಕ್ಕ ಪರಿಶೋಧಕರನ್ನು ಗೌರವಿಸಲಾಯಿತು.
ಆರಂಭದಲ್ಲಿ ಜಯಲಕ್ಷ್ಮೀ ಜೆ. ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಸ್ವಾಗತಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಗತ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ ಅನುಮೋದಿಸಿಕೊಂಡರು. 2018-2019ನೇ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಮಂಡಿಸಿ ಅನುಮೋದಿಸಿಕೊಂಡರು. ವಾರ್ಷಿಕ ಶಾಸಕಬದ್ಧ ಲೆಕ್ಕಪತ್ರ, ಬ್ಯಾಲೆನ್ಸ್ ಶೀಟ್, ಲೆಕ್ಕಪರಿಶೋಧಕರ ವರದಿಯನ್ನು ಹಾಗೂ 2019-2020ರ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕದ ಬಗ್ಗೆ ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ ಸಭೆಗೆ ತಿಳಿಸಿ ಮಂಜೂರಾತಿ ಪಡೆದರು. ಬಳಿಕ ಮುಂದಿನ ವರ್ಷದ ಬಜೆಟ್ ಮಂಡಿಸಿ ಮಂಜೂರಾತಿ ಪಡೆಯಲಾಯಿತು.
ಬಂಟರ ಸಂಘ ಪೊವಾಯಿ ಶಿಕ್ಷಣ ಸಮಿತಿಯ ವರದಿಯನ್ನು ಸಮಿತಿಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಮತ್ತು ಸಂಘದ ಉನ್ನತ ಶಿಕ್ಷಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ನೂತನ ಶಿಕ್ಷಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಜಯ ಎ. ಶೆಟ್ಟಿ ವಾಚಿಸಿದರು. ವರದಿ ವರ್ಷದಲ್ಲಿ ನಿಧನರಾದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ