ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ
Team Udayavani, May 31, 2020, 8:16 AM IST
ಪುಣೆ, ಮೇ 30: ಕೋವಿಡ್-19ರ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಳಿಸಲ್ಪಟ್ಟ ಅಥವಾ ವೇತನ ಕಡಿತವನ್ನು ಎದುರಿಸುತ್ತಿರುವ ನೌಕರರ ಉದ್ಯೋಗವನ್ನು ಉಳಿಸಿಕೊಡಲು ಮಧ್ಯಸ್ಥಿಕೆ ವಹಿಸುವಂತೆ ಐಒಟಿ ಕಂಪೆನಿಗಳ ನೌಕರರ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಪುಣೆ ಮೂಲದ ಯೂನಿಯನ್ವೊಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದೆ.
ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ ಸಿಎಂಗೆ ಬರೆದ ಪತ್ರದಲ್ಲಿ ಮಹಾರಾಷ್ಟ್ರದಾದ್ಯಂತದ ಹಲವಾರು ಐಟಿ, ಐಟಿಇಎಸ್, ಬಿಪಿಒ, ಕೆಪಿಒ ಕಂಪೆನಿಗಳು ಯಾವುದೇ ಕಾರಣವಿಲ್ಲದೆ ತಮ್ಮ ನೌಕರರನ್ನು ಸೇವೆಯಿಂದ ವಜಾಗೊಳಿಸಲು ಪ್ರಾರಂಭಿಸಿರುವುದಲ್ಲದೆ, ಅವರ ಸಂಬಳವನ್ನು ತಡೆಹಿಡಿಯಲು ಅಥವಾ ಕಡಿತಗೊಳಿಸಲು ಪ್ರಾರಂಭಿಸಿವೆ. ಇದು ಮಹಾರಾಷ್ಟ್ರ ಸರಕಾರ ಹೊರಡಿಸಿದ ನಿರ್ದೇಶನಗಳು ಮತ್ತು ಸಲಹೆಗಳ ಉಲ್ಲಂಘನೆಯಾಗಿದೆ ಎಂದು ನೈಟ್ಸ್ ಇದರ ಪ್ರಧಾನ ಕಾರ್ಯದರ್ಶಿ ಹರ್ಪ್ರೀತ್ ಸಲೂಜಾ ಅವರು ಹೇಳಿದ್ದಾರೆ.
ಇಂತಹ ಕಠಿನ ಸಮಯದಲ್ಲಿ ದೇಶದ ಹಲವಾರು ಉದ್ಯೋಗಿಗಳು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕಾರಣ ನೌಕರರ ಹಕ್ಕುಗಳನ್ನು ಸರಕಾರವು ಕಂಪೆನಿಗಳಿಗೆ ಅಗತ್ಯವಾದ ಆದೇಶಗಳು ಮತ್ತು ನಿರ್ದೇಶನಗಳಿಂದ ರಕ್ಷಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಆರು ಲಕ್ಷಕ್ಕೂ ಹೆಚ್ಚು ಐಟಿ, ಐಟಿಇಎಸ್, ಬಿಪಿಒ, ಕೆಪಿಒ ನೌಕರರ ಜೀವನ, ಉದ್ಯೋಗಗಳು ಮತ್ತು ಕುಟುಂಬಗಳನ್ನು ರಕ್ಷಿಸಲು ರಾಜ್ಯ ಸರಕಾರದ ಬೆಂಬಲವನ್ನು ಕೋರುತ್ತಿದೆ ಎಂದು ನೈಟ್ಸ್ ಹೇಳಿರುವುದಲ್ಲದೆ, ಉದ್ಯೋಗಿಗಳ ಇಂತಹ ಶೋಷಣೆ ಭವಿಷ್ಯದಲ್ಲಿ ಸಂಭವಿಸುವುದಿಲ್ಲ. ಕೆಲಸದ ಪರಿಸ್ಥಿತಿಗಳು ವೇಗವಾಗಿ ಸುಧಾರಿಸುತ್ತವೆ ಎಂಬುವುದು ನಮ್ಮ ಆಶಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.