ಕೋಸ್ಟಲ್ ಸಿನೆಮಾದಲ್ಲಿ ಏರಾ ಉಲ್ಲೆರ್ !
Team Udayavani, Apr 28, 2018, 2:53 PM IST
ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್ ಕಾಪಿಕಾಡ್. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ತೆಲಿಕೆದ ಬೊಳ್ಳಿ, ಚಂಡಿ ಕೋರಿ, ಅರೆಮರ್ಲೆರ್ ಸಹಿತ ತುಳು ಸಿನೆಮಾ ಲೋಕದಲ್ಲಿ ಕಾಪಿಕಾಡ್ ಅವರದ್ದು ನಿರಂತರ ಕೊಡುಗೆ. ಅದೇ ಮೂಡ್ನಲ್ಲಿ ಈಗ ಸದ್ದಿಲ್ಲದೆ ಸಿನೆಮಾ ಮಾಡುವುದಕ್ಕೆ ಕಾಪಿಕಾಡ್ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಹೆಸರನ್ನು ಪ್ರಕಟಿಸಿರುವ ಕಾಪಿಕಾಡ್, ಶೂಟಿಂಗ್ ಸಹಿತ ಇತರ ಮಾಹಿತಿಗಳನ್ನು ಸಸ್ಪೆನ್ಸ್ ಆಗಿ ಇಡಲು ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿಯೇ ಚಿತ್ರದ ಮುಹೂರ್ತ ನಡೆದು ನಾಲ್ಕೈದು ದಿನದ ಶೂಟಿಂಗ್ ನಡೆದಿದ್ದರೂ, ಕಾಪಿಕಾಡ್ ಅವರು ತಾವು ಮಾಡುತ್ತಿರುವ ಸಿನೆಮಾದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸಿನೆಮಾ ಶೂಟಿಂಗ್ ಎಲ್ಲ ಮುಗಿದ ಅನಂತರವೇ ಸಿನೆಮಾದ ಬಗ್ಗೆ ಪ್ರಚಾರ ಮಾಡುವ ಎಂಬ ಯೋಚನೆಯಲ್ಲಿ ಅವರಿದ್ದಾರೆ.
ಸಿನೆಮಾದ ಹೆಸರು “ಏರಾ ಉಲ್ಲೆರ್’. ಹೆಸರೇ ಸೂಚಿಸುವಂತೆ ಇಲ್ಲೊಂದು ಸಸ್ಪೆನ್ಸ್ನ ಸೂಚನೆ ಪಕ್ಕಾ ಆದಂತಾಗುತ್ತದೆ. ಹೀಗಾಗಿ ಈ ಸಿನೆಮಾ ಸಸ್ಪೆನ್ಸ್ ಎನ್ನುವುದು ದೃಢವಾಗುತ್ತದೆ. ತುಳುವಿನಲ್ಲಿ ಇಂತಹ ಪ್ರಯತ್ನ ಅಪರೂಪ. ಯಾಕೆಂದರೆ ಕಾಮಿಡಿ ಗಿಮಿಕ್ನಲ್ಲಿಯೇ ಸಿನೆಮಾ ಓಡುವುದು ಎಂದು ಈಗಾಗಲೇ ಫಿಕ್ಸ್ ಆಗಿರುವ ಕೋಸ್ಟಲ್ವುಡ್ನಲ್ಲಿ ಕಾಮಿಡಿ ಜತೆಗೆ ಇನ್ನೂ ಏನಾದರೂ ಬೇಕು ಎಂಬ ಕಳಕಳಿಗೆ ಕಾಪಿಕಾಡ್ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕಾಗಿ ಸಸ್ಪೆನ್ಸ್ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ.
ಗುಟ್ಟು ಬಿಡದೆ, ಮಂಗಳೂರಿನಲ್ಲಿ ಶೂಟಿಂಗ್ ಕಾಣುತ್ತಿರುವ “ಏರಾ ಉಲ್ಲೆರ್’ನಲ್ಲಿ ಅರ್ಜುನ್ ಕಾಪಿಕಾಡ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ “ಕರ್ಣೆ’ ಶೂಟಿಂಗ್ ಮುಗಿಸಿ ಬಂದಿರುವ ಅರ್ಜುನ್ “ಏರಾ ಉಲ್ಲೆರ್’ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಯಕಿಯಾಗಿ ರಶ್ಮಿತಾ ಚಂಗಪ್ಪ ಕಾಣಿಸಲಿದ್ದಾರೆ. ಉಳಿದಂತೆ ಯಾರಿದ್ದಾರೆ ಎಂಬುದು ಸದ್ಯದ ಕುತೂಹಲ. ಅಂದಹಾಗೆ, ತುಳುವಿನ ಕಾಮಿಡಿ ಸ್ಟಾರ್ಗಳು ಇದರಲ್ಲೂ ಇದ್ದಾರೆ ಹಾಗೂ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎಂಬ ಮಾಹಿತಿ ಇದೆ.
ಈಗಾಗಲೇ ಕಾಪಿಕಾಡ್ “ಅರೆ ಮರ್ಲೆರ್’ ಮುಗಿಸಿದ ಅನಂತರ “ಪಿಸ್ಂಟೆ’ ಎಂಬ ಸಿನೆಮಾ ಮಾಡುವುದಿತ್ತು. ಜತೆಗೆ ಕನ್ನಡದಲ್ಲಿ “ಜಬರ್ದಸ್ತ್’ ಎಂಬ ಸಿನೆಮಾ ಮಾಡುವ ಬಗ್ಗೆಯೂ ಯೋಚಿಸಿದ್ದರು. ಆದರೆ, ಅದರ ಮಧ್ಯೆಯೇ ಈಗ ದಿಢೀರಾಗಿ “ಏರಾ ಉಲ್ಲೆರ್’ ಸಿನೆಮಾ ಮಾಡಲಾಗುತ್ತಿದೆ. ಬೊಳ್ಳಿ ಮೂವೀಸ್ ಲಾಂಛನದಲ್ಲಿ ಸಿನೆಮಾ ರೆಡಿಯಾಗುತ್ತಿದೆ. ಮುಂದಿನ 18 ದಿನದಲ್ಲಿ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಲಿದೆ.
ಕುಡ್ಲಕ್ಕೆ ಶಿಫ್ಟ್ ಆದ “ಇಲ್ಲೊಕ್ಕೆಲ್’
ಡಾ| ಸುರೇಶ್ ಚಿತ್ರಾಪು ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ “ಇಲ್ಲೊಕೆೆRಲ್’ ಮೂರು ಹಂತದ ಚಿತ್ರೀಕರಣದ ಪ್ಲ್ರಾನ್ನಲ್ಲಿದೆ. ಈಗಾಗಲೇ ಬೆಂಗಳೂರಿನ ಪುಟ್ಟಣ್ಣ ಕಣಗಾಲ್ ಸ್ಟುಡಿಯೋ ಹಾಗೂ ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಶೂಟಿಂಗ್ ಆಗಿದೆ. ಈಗ ಮೂರನೇ ಹಂತದಲ್ಲಿ ಚಿತ್ರತಂಡ ತವರಿನತ್ತ ಆಗಮಿಸಲಿದೆ. ಕೆಲವೇ ದಿನದಲ್ಲಿ ಮಂಗಳೂರು ಸಹಿತ ಕರಾವಳಿ ಭಾಗದಲ್ಲಿ ಅಂತಿಮ ಹಂತದ ಶೂಟಿಂಗ್ ನಡೆಯಲಿದೆ.
ಅದ್ವಿತಿ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದು, ಕುಸಲ್ದರಸೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ವಿಸ್ಮಯ ವಿನಾಯಕ್, ಪಿಲಿಬೈಲ್ ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್, ಕುರಿಬಾಂಡ್ ರಂಗ ಅಭಿನಯಿಸಿದ್ದಾರೆ. ನಿತೇಶ್ ಸಾಗರ್ ಮತ್ತು ಪಿ.ಎಸ್. ಜಯಚಂದ್ರರಾಜು ನಿರ್ಮಾಪಕರು.
ರೆಡಿಯಾದ ಪತ್ತೀಸ್ ಗ್ಯಾಂಗ್!
ಮನೋಜ್ ಕುಮಾರ್ ಅರ್ಪಿಸುವ ಇನ್ಬಾಕ್ಸ್ ಕ್ರಿಯೇಟಿವ್ಸ್ನಲ್ಲಿ ಪ್ರೀತಮ್ ಎಂ.ಎನ್., ಸೂರಜ್ ಬೋಳಾರ್ ನಿರ್ಮಾಣ ಹಾಗೂ ಸೂರಜ್ ಬೋಳಾರ್ ನಿರ್ದೇಶನದ “ಪತ್ತೀಸ್ ಗ್ಯಾಂಗ್’ ಈಗಾಗಲೇ ಶೂಟಿಂಗ್ ಸಹಿತ ಎಲ್ಲ ತಯಾರಿಗಳನ್ನು ಪೂರ್ಣಗೊಳಿಸಿ ಬಿಡುಗಡೆಯ ತವಕದಲ್ಲಿದೆ. ಮೋಹನ್ ಶೇಣಿ (ನೀನಾಸಂ), ವಿಸ್ಮಯ ವಿನಾಯಕ್, ಅಜಯ್ ರಾಜ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನವ್ಯತಾ ರೈ, ಚಂದ್ರಹಾಸ್ ಉಳ್ಳಾಲ್, ಅರವಿಂದ ಬೋಳಾರ್, ಕಿಶೋರ್ ಡಿ. ಶೆಟ್ಟಿ, ವಿಜಯ ಕುಮಾರ್ ಕೊಡಿಯಾಲ್ಬೈಲ್, ದೀಪಕ್ ರೈ ಪಾಣಾಜೆ ಮುಂತಾದವರು ಚಿತ್ರದಲ್ಲಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಸುರೇಶ್ ನಾಯಕ್ ಎಡಿಟಿಂಗ್ನಲ್ಲಿ ಕೈ ಜೋಡಿಸಿದ್ದಾರೆ. ಆಗಸ್ಟ್ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದು ಪ್ರಮೋಶನಲ್ ಹಾಡು ಸಹಿ ತ ಒಟ್ಟು ಎರಡು ಹಾಡು ಇದ್ದು, ಜೂನ್, ಜುಲೈನಲ್ಲಿ ಆಡಿಯೋ ರಿಲೀಸ್ ಆಗುವ ಸಾಧ್ಯತೆ.
“ಕಟಪಾಡಿ ಕಟ್ಟಪ್ಪ’ನ ಹಾಡು ರಿಲೀಸ್ಗೆ ಸುದೀಪ್!
ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ನಿರ್ಮಾಣದ “ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂ ರು ಪುರಭವನದಲ್ಲಿ ನಡೆಯಲಿದೆ. ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್ ಆಡಿಯೋ ರಿಲೀಸ್ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್ವುಡ್ನಲ್ಲಿ ಗರಿ ಮೂಡಿಸಿದಂತಾಗಿದೆ. ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು ಸ್ಯಾಂಡಲ್ವುಡ್ ಸಹಿತ ದೇಶದ ಎಲ್ಲ ಮೂಲೆಯಿಂದಲೂ ನೋಡುತ್ತಿರುವ ಸಂದರ್ಭದಲ್ಲಿಯೇ ಸುದೀಪ್ ತುಳು ಸಿನೆಮಾದ ಆಡಿಯೋ ರಿಲೀಸ್ಗೆ ಆಗಮಿಸಲು ಒಪ್ಪಿರುವುದು ವಿಶೇಷ. ಅಂದಹಾಗೆ, ಕಟಪಾಡಿ ಕಟ್ಟಪ್ಪ ಸಿನೆಮಾ ಬಗ್ಗೆ ಹೇಳುವುದಾರೆ, ಖ್ಯಾತ ರಂಗಭೂಮಿ ಕಲಾವಿದ ಜೆ.ಪಿ. ತುಮಿನಾಡ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಹಲವು ಖ್ಯಾತ ನಟರು ಅಭಿನಯಿಸಿದ್ದಾರೆ. ಪ್ರಕಾಶ್ ಸಂಗೀತ ಒದಗಿಸಿದ್ದಾರೆ.