ವಾಲ್ಕೇಶ್ವರ ಶ್ರೀ ಕಾಶೀ ಮಠ: ಕಾರ್ತಿಕ ಹುಣ್ಣಿಮೆ ಉತ್ಸವ
Team Udayavani, Nov 10, 2017, 3:01 PM IST
ಮುಂಬಯಿ: ವಾಲ್ಕೇಶ್ವರ ಶ್ರೀ ಕಾಶೀ ಮಠದಲ್ಲಿ ನ. 4ರಂದು ಕಾರ್ತಿಕ ಪೂರ್ಣಿಮೆಯ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಜಿಎಸ್ಬಿ ಸೇವಾ ಮಂಡಲ ಸಯಾನ್ನ ಪ್ರಾಯೋಜಕತ್ವ ಹಾಗೂ ನಗರದ ಸರ್ವ ಜಿಎಸ್ಬಿ ಸಂಘಟನೆಯವರ ಸಹಕಾರದಿಂದ ಜರಗಿದ ಈ ಕಾರ್ಯಕ್ರಮವು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಆದೇಶಾನುಸಾರವಾಗಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 9ರಿಂದ ವಿವಿಧ ಪೂಜೆ, ಭಜನೆ, ಮಧ್ಯಾಹ್ನ 1.30ರಿಂದ ಮಧ್ಯಾಹ್ನ ಪೂಜೆ, ಆರತಿ, ಅಪರಾಹ್ನ 2.30 ರಿಂದ ವನ ಭೋಜನ, ಬ್ರಾಹ್ಮಣ ಸಂತರ್ಪಣೆ, ಸಂಜೆ 6ರಿಂದ ರಾತ್ರಿ ಪೂಜೆಯಾದ ಬಳಿಕ ವಿವಿಧ ಹೂವುಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ವೇದವ್ಯಾಸ ದೇವರ ಮೆರವಣಿಗೆ ನಡೆಯಿತು.
ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡ ಮೆರವಣಿಗೆಯಲ್ಲಿ ವೇದಘೋಷ, ಮಂತ್ರ ಪಠಣೆ, ಭಜನೆ ತಂಡಗಳಿಂದ ಭಜನೆ, ಸ್ಯಾಕೊÕಫೋನ್ ವಾದನ, ಭಕ್ತರ ಜೈಕಾರ, ಮದ್ದು ಪ್ರದರ್ಶನದೊಂದಿಗೆ ವಾಲ್ಕೇಶ್ವರ ಬಾಣಗಂಗಾ ಪರಿಸರದಿಂದ ಸಾಗಿ ಶ್ರೀ ಕಾಶೀ ಮಠಕ್ಕೆ ಆಗಮಿಸಿತು.
ರಾತ್ರಿ 8.15ರಿಂದ ಆರತಿಯೊಂದಿಗೆ ಪ್ರಸಾದ ವಿತರಣೆಯಾಯಿತು. ಅಂದು ವಾಲ್ಕೇಶ್ವರ ಶ್ರೀ ಮಠಕ್ಕೆ ಆಗಮಿಸುವ ಸಮಾಜ ಬಾಂಧವರಿಗಾಗಿ ಮುಂಬಯಿ ನಗರದ ವಿವಿಧ ವಿಭಾಗದಿಂದ ಉಚಿತ ಬಸ್ ಸೌಕರ್ಯವನ್ನು ಜಿಎಸ್ಬಿ ಸೇವಾ ಮಂಡಲದ ವತಿಯಿಂದ ಆಯೋಜಿ ಸಲಾಗಿತ್ತು. ನ. 5ರಂದು ಶ್ರೀ ಮಠದಲ್ಲಿ ಬೆಳಗ್ಗೆ ಅವಭೃತೋತ್ಸವ ಕಾರ್ಯಕ್ರಮ ಜರಗಿತು. ಬಳಿಕ ಫಲಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.