ಭಾರತೀಯ ಕ್ರಿಕೆಟಿಗರ ಸುರಕ್ಷತೆಗೆ ಬಿಸಿಸಿಐ ಆಗ್ರಹ
Team Udayavani, Feb 28, 2019, 1:00 AM IST
ದುಬಾೖ: ದುಬಾೖಯಲ್ಲಿ ಬುಧವಾರ ಬಹುನಿರೀಕ್ಷಿತ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಸಭೆ ಶುರುವಾಗಿದೆ. ನಿರೀಕ್ಷೆಯಂತೆಯೇ ಬಿಸಿಸಿಐ, ಇಂಗ್ಲೆಂಡ್ನಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಭಾರತೀಯ ಕ್ರಿಕೆಟಿಗರ ಹಾಗೂ ಅಭಿಮಾನಿಗಳ ಸುರಕ್ಷತೆಯ ಪ್ರಶ್ನೆ ಎತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಐಸಿಸಿ, ಈ ಬಗ್ಗೆ ಬಿಸಿಸಿಐ ಚಿಂತಿಸುವ ಅಗತ್ಯವೇ ಇಲ್ಲ. ಇದಕ್ಕಾಗಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಭಯೋತ್ಪಾದಕರ ನೆಲೆಯಾಗಿರುವ ರಾಷ್ಟ್ರಗಳೊಂದಿಗೆ, ಐಸಿಸಿ ಕ್ರಿಕೆಟ್ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆಂದು ಬಿಸಿಸಿಐ ಹೇಳಿಕೊಂಡಿತ್ತು. ಈ ಬಗ್ಗೆ ಬಿಸಿಸಿಐ ಏನು ಹೇಳಿದೆ, ಅದಕ್ಕೆ ಐಸಿಸಿ ಏನು ಪ್ರತಿಕ್ರಿಯೆ ನೀಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಅಲ್ಲದೇ ಪಾಕಿಸ್ಥಾನದ ಉಗ್ರರು ಪುಲ್ವಾಮಾದಲ್ಲಿ ನಡೆಸಿದ ದಾಳಿಯ ಬಗ್ಗೆ ಬಿಸಿಸಿಐ, ಐಸಿಸಿ ಸಭೆಯಲ್ಲಿ ಏನು ಹೇಳಿದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.
ಲೆಕ್ಕಾಚಾರದ ಪ್ರಕಾರ ಐಸಿಸಿ ಸಭೆಯ ನಡಾವಳಿಗಳಲ್ಲಿ, ಬಿಸಿಸಿಐನ ಈ ಒತ್ತಾಯಗಳು ಇರಲಿಲ್ಲ. ಭಾರತ-ಪಾಕಿಸ್ಥಾನ ನಡುವಿನ ಬಿಗುವಿನ ಪರಿಸ್ಥಿತಿ ಗಮನಿಸಿ ಅದನ್ನು ಐಸಿಸಿ ಸೇರಿಸಿಕೊಂಡಿದೆ.
ಪುಲ್ವಾಮಾ ಘಟನೆ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದು, ಪಾಕಿಸ್ಥಾನದ ವಿರುದ್ಧ ವಿಶ್ವಕಪ್ ಆಡಬಾರದು ಎಂಬ ಕೂಗು ತೀವ್ರಗೊಂಡಿದೆ. ಭಾರತೀಯ ಕ್ರೀಡಾ ಪ್ರೇಮಿಗಳ ಈ ಆಕ್ರೋಶವನ್ನು ಐಸಿಸಿ ಸಭೆಯಲ್ಲಿ ಪ್ರಸ್ತಾವಿಸುವ ಬಗ್ಗೆ ಬಿಸಿಸಿಐ ಹೇಳಿತ್ತು. ಆದರೆ ಪಾಕಿಸ್ಥಾನ ವಿರುದ್ಧ ವಿಶ್ವಕಪ್ನಲ್ಲಿ ಆಡಬೇಕೋ, ಬೇಡವೋ ಎಂಬ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದನ್ನು ಕೇಂದ್ರ ಸರಕಾರದ ನಿರ್ಧಾರಕ್ಕೆ ಬಿಟ್ಟಿದೆ.