“ಆತ್ಮಾವಲೋಕನಕ್ಕೆ ಅವಕಾಶ ಸಿಕ್ಕಿತು’
Team Udayavani, Aug 20, 2020, 10:21 PM IST
ಬೆಂಗಳೂರು: ವಿಶ್ವಾದ್ಯಂತ ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ದೊರೆತ ಬಿಡುವಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಧಾರಾಳ ಅವಕಾಶ ಸಿಕ್ಕಿತು ಎಂದು ಭಾರತ ಮಹಿಳಾ ಹಾಕಿ ತಂಡದ ಗೋಲ್ಕೀಪರ್ ಸವಿತಾ ಪೂನಿಯ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪುನರಾರಂಭಗೊಂಡ ಮಹಿಳಾ ತಂಡದ ತರಬೇತಿ ಶಿಬಿರದ ವೇಳೆ ಮಾತನಾಡಿದ ಸವಿತಾ, “ಈ ಬಾರಿ ದೀರ್ಘ ಬಿಡುವು ಸಿಕ್ಕಿತು. ಈ ಅವಧಿಯಲ್ಲಿ ನಮ್ಮ ಜೀವನದ ಅವಲೋಕನ ಮಾಡಿಕೊಳ್ಳುವ ಅವಕಾಶವನ್ನು ತೆರೆದಿಟ್ಟಿತು. ನನ್ನನ್ನು ನಾನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ’ ಎಂದು ಸವಿತಾ ಹೇಳಿದರು.
ದೈಹಿಕ ಕ್ಷಮತೆಯ ಅಗತ್ಯ
“ದೈಹಿಕ ಕ್ಷಮತೆಯನ್ನು ಮರಳಿ ಪಡೆಯುವ ಮಹತ್ವದ ಸವಾಲು ಈಗ ನಮ್ಮ ಮುಂದಿದೆ. ಹೊರಾಂಗಣದಲ್ಲಿ ಓಟ, ಉನ್ನತ ದರ್ಜೆಯ ವ್ಯಾಯಾಮಗಳು ಮತ್ತಿತರ ಕಸರತ್ತುಗಳನ್ನು ಮಾಡಲಾಗುತ್ತಿದೆ’ ಎಂದರು.
“ತವರೂರಿನಿಂದ ಮರಳಿದ ಅನಂತರ ಎಲ್ಲ ಆಟಗಾರ್ತಿಯರು 14 ದಿನಗಳ ಪ್ರತ್ಯೇಕ ಕ್ವಾರಂಟೈನ್ ಮುಗಿಸಿದ್ದೇವೆ. ಅದರಂತೆ ತರಬೇತುದಾರರ ಮತ್ತು ಆರೋಗ್ಯ ಸಿಬಂದಿಯ ಸೂಚನೆ ಮೇರೆಗೆ ಹೊರಾಂಗಣ ಅಭ್ಯಾಸ ಆರಂಭಿಸಿದ್ದೇವೆ. ಪರಸ್ಪರ ಅಂತರ ಕಾಯ್ದುಕೊಂಡು ತರಬೇತಿ ನಡೆಸುತ್ತಿದ್ದೇವೆ. ಹಾಕಿ ಟಫ್ì ಮೇಲೆ ನಮ್ಮ ಕಸರತ್ತುಗಳನ್ನು ಮಾಡುತ್ತಿದ್ದೇವೆ. ಇದರಿಂದ ಮರಳಿ ಲಯಕ್ಕೆ ಬರಲು ಸಾಧ್ಯವಾಗುತ್ತದೆ. ಮಾರ್ಗಸೂಚಿಯ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳನ್ನೂ ಪಾಲಿಸಲಾಗುತ್ತಿದೆ’ ಎಂದು ಸವಿತಾ ಹೇಳಿದರು.