ಸಿಎಂ ಸ್ಥಾನದ ಘನತೆ ಹಾಳು
Team Udayavani, Feb 24, 2018, 8:20 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಒಳಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು 90 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿರುವ ಬಗ್ಗೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಆ
ಮೂಲಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಘನತೆಯನ್ನೇ ಹಾಳು ಮಾಡಿದರು ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮಾಡಿದ ಆಧಾರರಹಿತ ಆರೋಪವನ್ನು ಅತ್ಯಂತ ಕಟು ಶಬ್ಧಗಳಿಂದ ಖಂಡಿಸುತ್ತೇನೆ. ರಾಜ್ಯದ ಅಭಿವೃದ್ಧಿಯ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿರುವ ಮುಖ್ಯಮಂತ್ರಿಗಳು, ಕನಿಷ್ಟ ತಮ್ಮ ಸ್ಥಾನದ ಘನತೆ ಕಾಪಾಡಿಕೊಳ್ಳುವಲ್ಲಿ ಕೂಡ ದಯನೀಯವಾಗಿ ಸೋತಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸದನದ ಒಳಗೆ ದೇಶದ ಪ್ರಧಾನಿ ಬಗ್ಗೆ ಆಧಾರರಹಿತ ಆರೋಪ ಮಾಡುವಷ್ಟು ಕೆಳಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಅತಿ ಭ್ರಷ್ಟ ಸರ್ಕಾರವನ್ನು ನೀಡಿದ ಅಪಖ್ಯಾತಿ ಹೊಂದಿರುವ
ಸಿದ್ದರಾಮಯ್ಯ, ಸದನದ ಒಳಗೆ ಸುಳ್ಳು ರಾಜಕೀಯ ಆರೋಪ ಮಾಡುವ ಮೂಲಕ ತಮ್ಮ ಹತಾಶೆ ಮತ್ತು ಭಂಡತನ ಪ್ರದರ್ಶಿಸಿದ್ದಾರೆ. ಇದಕ್ಕೆ ರಾಜ್ಯದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.