ಬೇರ್ಸ್ಟೊ ಬೇರ್ಪಡಿಸಿದ್ದಕ್ಕೆ ಹುಸೇನ್ ಅಸಮಾಧಾನ
Team Udayavani, Jan 25, 2021, 7:00 AM IST
ಲಂಡನ್: ಭಾರತದೆದುರಿನ ಟೆಸ್ಟ್ ಸರಣಿಗಾಗಿ ಪ್ರಕಟಿಸಲಾದ ಟೆಸ್ಟ್ ತಂಡದಿಂದ ಅನುಭವಿ ಕ್ರಿಕೆಟಿಗ ಜಾನಿ ಬೇರ್ಸ್ಟೊ ಅವರನ್ನು ಕೈಬಿಟ್ಟಿದ್ದಕ್ಕೆ ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂಗ್ಲೆಂಡ್ ಪಾಲಿಗೆ ಇದು ಅತ್ಯಂತ ಮಹತ್ವದ ಸರಣಿ. ಸ್ಪಿನ್ನರ್ಗಳನ್ನು ಸಮರ್ಥವಾಗಿ ಎದುರಿಸಬಲ್ಲ ನಮ್ಮ ಮೂವರು ಕ್ರಿಕೆಟಗರಲ್ಲಿ ಬೇರ್ಸ್ಟೊ ಕೂಡ ಒಬ್ಬರು. ಆದರೆ ಅವರಿಗೆ ಲಂಡನ್ನಿನ ಬೋರ್ಡಿಂಗ್ ಪಾಸ್ ನೀಡಿದ್ದಾರೆ. ಉಳಿದವರು ಚೆನ್ನೈಗೆ ತೆರಳಲಿದ್ದಾರೆ’ ಎಂದು “ಸ್ಕೈ ನ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಹುಸೇನ್ ಹೇಳಿದರು.
“ಇದು ಕ್ರಿಕೆಟಿಗರಿಗೆ ನೀಡಿದ ವಿಶ್ರಾಂತಿಯೋ ಅಥವಾ ಅವರ್ತನ ಪದ್ಧತಿಯೋ ತಿಳಿಯದು. ಭಾರತವನ್ನು ಅವರದೇ ನೆಲದಲ್ಲಿ ಮೊದಲ ಟೆಸ್ಟ್ ನಲ್ಲಿ ಎದುರಿಸುವಾಗ ಬಲಿಷ್ಠ ತಂಡದ ಅಗತ್ಯವಿದೆ. ಒಂದು ವೇಳೆ ಈ ಪಂದ್ಯದ ಬಳಿಕ ಇಂಗ್ಲೆಂಡ್ ಆ್ಯಶಸ್ ಸರಣಿಗಾಗಿ ಬ್ರಿಸ್ಬೇನ್ನಲ್ಲಿ ಆಡುವುದಿದ್ದರೆ ಆಗ ಬಲಾಡ್ಯ ತಂಡವನ್ನು ಕಳುಹಿಸುತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ ನಾಸಿರ್ ಹುಸೇನ್.
ನಾಸಿರ್ ಹುಸೇನ್ ಪ್ರಕಾರ, ಸ್ಪಿನ್ನರ್ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸುವವರು ಭಾರತ ಪ್ರವಾಸಕ್ಕೆ ಅತ್ಯಗತ್ಯ. ರೂಟ್, ಸ್ಟೋಕ್ಸ್ ಜತೆಗೆ ಬೇರ್ಸ್ಟೊ ಅವರಲ್ಲೂ ಇಂಥದೊಂದು ಸಾಮರ್ಥ್ಯವಿದೆ. ಹೀಗಾಗಿ ಬೇರ್ಸ್ಟೊ ಭಾರತ ಸರಣಿಗೆ ಬೇಕಿತ್ತು ಎಂಬುದು ಅವರ ತರ್ಕ.