ನೂತನ ಅವತಾರದಲ್ಲಿ ಕೆಪಿಎಲ್: ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿ
Team Udayavani, Jul 17, 2022, 5:30 AM IST
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮತ್ತೆ ಟಿ20 ಕ್ರಿಕೆಟ್ ಲೀಗ್ಗೆ ಚಾಲನೆ ನೀಡಲಿದೆ. ಈ ಬಾರಿ ನಡೆಯಲಿರುವುದು “ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಪಂದ್ಯಾವಳಿ’.
ಆ. 7ರಿಂದ 26ರ ತನಕ ಬೆಂಗಳೂರು ಮತ್ತು ಮೈಸೂರಿನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ ಎಂಬುದಾಗಿ ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಶನಿವಾರ ಘೋಷಿಸಿದರು.
ಇದೇ ವೇಳೆ ಕೂಟದ ಲಾಂಛನ ಮತ್ತು ಟ್ರೋಫಿಯನ್ನೂ ಬಿಡುಗಡೆ ಮಾಡ ಲಾಯಿತು. ಇದು ಕೆಲವು ಸಮಯದಿಂದ ನಿಂತುಹೋಗಿದ್ದ “ಕರ್ನಾಟಕ ಪ್ರೀಮಿ ಯರ್ ಲೀಗ್’ನ (ಕೆಪಿಎಲ್) ಹೊಸ ರೂಪ. ಮೈಸೂರಿನ ರಾಜರೂ, ಕೆಎಸ್ಸಿಎ ಅಧ್ಯಕ್ಷರೂ ಆಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಇದಕ್ಕೆ “ಮಹಾರಾಜ ಟ್ರೋಫಿ’ ಎಂದು ಹೆಸರಿಡಲಾಗಿದೆ.
ಬಿಗ್ ಬಾಶ್ ಮಾದರಿ
“ಕೋವಿಡ್-19 ಕಾರಣದಿಂದ ನಮಗೆ ಟಿ20 ಲೀಗ್ ಆಯೋಜಿಸಲು ಸಾಧ್ಯವಾಗ ಲಿಲ್ಲ. ಇದೊಂದು ದೊಡ್ಡ ಹಿನ್ನಡೆ. ಈ ವರ್ಷದಿಂದ ಇದಕ್ಕೆ ಮರು ಚಾಲನೆ ನೀಡಲು ನಿರ್ಧರಿಸಲಾಗಿದೆ.
ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್ ಮಾದರಿಯಲ್ಲಿ ಕೂಟ ವನ್ನು ಆಯೋಜಿಸುವುದು ನಮ್ಮ ಗುರಿ’ ಎಂಬುದಾಗಿ ರೋಜರ್ ಬಿನ್ನಿ ಹೇಳಿದರು.
ಆರು ತಂಡಗಳು
ಕೂಟಕ್ಕಾಗಿ ಕರ್ನಾಟಕವನ್ನು ಒಟ್ಟು 6 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ರಾಯ ಚೂರು ತಂಡಗಳು “ಮಹಾರಾಜ ಟ್ರೋಫಿ’ಗಾಗಿ ಸೆಣಸಲಿವೆ.
ಹಿಂದೆ ಕೆಪಿಎಲ್ ತಂಡಗಳಿಗೆ ಫ್ರಾಂಚೈಸಿ ಗಳು ಮಾಲಕರಾಗಿದ್ದವು. ಈ ಬಾರಿ ಆಡುವ ಅಷ್ಟೂ ತಂಡಗಳಿಗೆ ಕೆಎಸ್ಸಿಎ ತಾನೇ ಮಾಲಕ. ತಂಡಗಳಿಗೆ ಆಟಗಾರರನ್ನು, ನಾಯಕರನ್ನು, ಸಹಾಯಕ ಸಿಬಂದಿಯನ್ನು ನೇಮಕ ಮಾಡುವುದೇ ಕೆಎಸ್ಸಿಎ.
ಆಟಗಾರರನ್ನು ಏಲಂ ಬದಲು 5 ಮಂದಿ ಆಯ್ಕೆಗಾರರು ಸೇರಿ “ಡ್ರಾಫ್ಟ್’ ಮಾದರಿಯಲ್ಲಿ ಆರಿಸಲಿದ್ದಾರೆ. ಈ ಆಯ್ಕೆಗಾರರೆಂದರೆ ಆನಂದ ಕಟ್ಟಿ, ಎ.ಆರ್. ಮಹೇಶ್, ಎಂ.ಬಿ. ಪ್ರಶಾಂತ್, ಸಂತೋಷ್ ಒಡೆಯರಾಜ್, ರಘೋತ್ತಮ್ ನವಲಿ.
ರೋಜರ್ ಬಿನ್ನಿ ಅಧ್ಯಕ್ಷತೆಯಲ್ಲಿ ನಡೆಸಲಾದ ವಿವಿಧ ಸಭೆಗಳ ಬಳಿಕ ಕೋರ್ ಗ್ರೂಪ್ ಗಳನ್ನು ರಚಿಸಲಾಗಿದೆ. ಕೂಟದಲ್ಲಿ ಪಾಲ್ಗೊಳ್ಳಲಿರುವ ಕ್ರಿಕೆಟಿಗರೆಲ್ಲ ಕರ್ನಾಟಕದವರು ಹಾಗೂ ಕೆಎಸ್ಸಿಎಯಿಂದ ನೋಂದಾಯಿಸಲ್ಪಟ್ಟವರೇ ಆಗಿರುತ್ತಾರೆ.
ಮೈಸೂರಿನಲ್ಲಿ ಆರಂಭ
ಪಂದ್ಯಾವಳಿ ಅ. 7ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ಇಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿವೆ. ಫೈನಲ್ ಸೇರಿದಂತೆ 16 ಪಂದ್ಯಗಳನ್ನು ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆಡಲಾಗುವುದು.