ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ
Team Udayavani, Jan 17, 2021, 10:28 PM IST
ಮುಂಬಯಿ, : ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಆತಿಥೇಯ ಮುಂಬಯಿ ತಂಡದ ಶೋಚನೀಯ ಪ್ರದರ್ಶನ ಮುಂದುವರಿದಿದೆ. ರವಿವಾರ ನಡೆದ ಪುದುಚೇರಿ ವಿರುದ್ಧದ ಪಂದ್ಯದಲ್ಲೂ ಅದು ಮುಖಭಂಗ ಅನುಭವಿಸಿದೆ. ಇದರೊಂದಿಗೆ ಆಡಿದ ಎಲ್ಲ 4 ಪಂದ್ಯಗಳಲ್ಲೂ ಸೋತ ಸೂರ್ಯಕುಮಾರ್ ಯಾದವ್ ಪಡೆ “ಎಲೈಟ್ ಇ’ ವಿಭಾಗದಲ್ಲಿ ಕೊನೆಯ ಸ್ಥಾನಕ್ಕೇ ಅಂಟಿಕೊಂಡಿತು.
“ವಾಂಖೇಡೆ ಸ್ಟೇಡಿಯಂ’ನಲ್ಲಿ ತೀರಾ ನಿರಾಶಾದಾಯಕ ಬ್ಯಾಟಿಂಗ್ ನಡೆಸಿದ ಮುಂಬಯಿ 6 ವಿಕೆಟ್ ಸೋಲಿಗೆ ತುತ್ತಾಯಿತು. ಮೊದಲು ಬ್ಯಾಟಿಂಗ್ ನಡೆಸಿ 19 ಓವರ್ಗಳಲ್ಲಿ ಜುಜುಬಿ 94 ರನ್ನಿಗೆ ಕುಸಿಯಿತು. ಬಲಗೈ ಮಧ್ಯಮ ವೇಗಿ ಶಾಂತಮೂರ್ತಿ 20 ರನ್ನಿಗೆ 5 ವಿಕೆಟ್ ಉಡಾಯಿಸಿ ಪುದುಚೇರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಬಳಿಕ ಪುದುಚೇರಿ 19 ಓವರ್ಗಳಲ್ಲಿ 4 ವಿಕೆಟಿಗೆ 95 ರನ್ ಹೊಡೆದು ಸ್ಮರಣೀಯ ಜಯ ಸಾಧಿಸಿತು.
ಇದು ಪುದುಚೇರಿಗೆ ಒಲಿದ ಸತತ ಎರಡನೇ ಜಯ. ಹಿಂದಿನ ಪಂದ್ಯದಲ್ಲಿ ಅದು ಆಂಧ್ರವನ್ನು 4 ವಿಕೆಟ್ಗಳಿಂದ ಮಣಿಸಿತ್ತು.
ಮುಂಬಯಿ ಸರದಿಯಲ್ಲಿ ಎರಡಂಕೆಯ ಸ್ಕೋರ್ ಗಳಿಸಿದ್ದು ಮೂವರು ಮಾತ್ರ. ಶಿವಂ ದುಬೆ 28, ಆಕಾಶ್ ಪಾರ್ಕರ್ 20 ಮತ್ತು ಯಶಸ್ವಿ ಜೈಸ್ವಾಲ್ 15 ರನ್ ಮಾಡಿದರು. ಪುದುಚೇರಿ ಸರದಿಯಲ್ಲಿ ಎಸ್. ಕಾರ್ತಿಕ್ 26, ಶೆಲ್ಡನ್ ಜಾಕ್ಸನ್ 24 ಹಾಗೂ ನಾಯಕ ದಾಮೋದರನ್ ರೋಹಿತ್ 18 ರನ್ ಮಾಡಿದರು. ದುಬೆ 2, ಅರ್ಜುನ್ ತೆಂಡುಲ್ಕರ್ ಒಂದು ವಿಕೆಟ್ ಕಿತ್ತರು.