ಕ್ರಿಕೆಟಿಗರ ಉದ್ದೀಪನ ಪರೀಕ್ಷೆಗೆ ಕ್ರೀಡಾ ಸಚಿವರ ಸೂಚನೆ
Team Udayavani, Oct 30, 2017, 6:35 AM IST
ಹೊಸದಿಲ್ಲಿ: ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ನಡೆಸದಿದ್ದರೆ ನಾಡಾವನ್ನು (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ) ಅಮಾನ್ಯಗೊಳಿಸಲಾಗುವುದು ಎಂದು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಪತ್ರ ಬರೆದ ಬೆನ್ನಲ್ಲೇ ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ನಡೆಸುವಂತೆ ಕೇಂದ್ರ ಸರಕಾರ ನಾಡಾಕ್ಕೆ ಸೂಚಿಸಿದೆ. ಕ್ರಿಕೆಟಿಗರನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸಬೇಕು.
ಇಲ್ಲದಿದ್ದರೆ ನಾಡಾ ಮಾನ್ಯತೆ ರದ್ದುಗೊಳಿಸಬೇಕಾಗುತ್ತದೆ ಎಂದು ಕ್ರೀಡಾ ಸಚಿವರಿಗೆ ವಾಡಾ ಪ್ರಧಾನ ನಿರ್ದೇಶಕ ಒಲಿವಿಯರ್ ನಿಗ್ಲಿ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಕ್ರಿಕೆಟಿಗರನ್ನು ಪರೀಕ್ಷೆಗೆ ಒಳಪಡಿಸುವಂತೆ ನಾಡಾಕ್ಕೆ ತಿಳಿಸಿದ್ದಾರೆ. ಈ ಕುರಿತಂತೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ನಾಡಾ ಪರೀಕ್ಷೆಯನ್ನು ಬಿಸಿಸಿಐ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದನ್ನು ಸ್ಮರಿಸಬಹುದು.