ಸೂರ್ಯಕುಮಾರ್ “ನ್ಯೂ ಮಿಸ್ಟರ್ 360′: ಸುನೀಲ್ ಗಾವಸ್ಕರ್
Team Udayavani, Nov 10, 2022, 7:30 AM IST
ಮುಂಬಯಿ: ಸೂರ್ಯಕುಮಾರ್ ಯಾದವ್ ವಿಶ್ವ ಕ್ರಿಕೆಟಿನ ನೂತನ “ಮಿಸ್ಟರ್ 360 ಡಿಗ್ರಿ ಬ್ಯಾಟರ್’ ಆಗಿದ್ದು, ಇವರಿಲ್ಲದೇ ಹೋಗಿದ್ದರೆ ಭಾರತ 140-150 ರನ್ ಗಳಿಸಲಿಕ್ಕೂ ಪರದಾಡುತ್ತಿತ್ತು ಎಂಬುದಾಗಿ ಮಾಜಿ ಆರಂಭಕಾರ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ಸೆಮಿಫೈನಲ್ನಲ್ಲಿ ಸೂರ್ಯಕುಮಾರ್ ಪಾತ್ರ ನಿರ್ಣಾಯಕವಾಗಲಿದೆ ಎಂದೂ ಸೇರಿಸಿದರು. “ಸೂರ್ಯಕುಮಾರ್ ಯಾದವ್ ಅವರ ಪ್ರತಿಯೊಂದು ಇನ್ನಿಂಗ್ಸ್ ಕೂಡ ಅಮೋಘ, ಅದ್ಭುತ. ಅವರು ಹೇಗೆ ಬೇಕಾದರೂ ಹಾಗೆ, ಯಾವ ಶೈಲಿಯಲ್ಲಿ ಬೇಕಾದರೂ ಚೆಂಡನ್ನು ಬಡಿದಟ್ಟುತ್ತಿದ್ದಾರೆ. ಜಿಂಬಾಬ್ವೆ ವಿರುದ್ಧ ವಿಕೆಟ್ ಕೀಪರ್ನ ಎಡಕ್ಕೆ ಬಂದು ಬಾರಿಸಿದ ಆ ಒಂದು ಸಿಕ್ಸರ್ ಅತ್ಯಂತ ಮನಮೋಹಕವಾಗಿತ್ತು.
ಅನುಮಾನವೇ ಬೇಡ, ಸೂರ್ಯ “ನ್ಯೂ ಮಿಸ್ಟರ್ 360’…’ ಎಂದ ಗಾವಸ್ಕರ್, ಸೂರ್ಯನ ಇನ್ನಷ್ಟು ಹೊಡೆತಗಳನ್ನು ಪ್ರಶಂಸಿಸಿದರು.
“ಲಾಫೆrಡ್ ಎಕ್ಸ್ಟ್ರಾ ಕವರ್ ಡ್ರೈವ್, ಸ್ಟ್ರೇಟ್ ಡ್ರೈವ್… ಒಂದಕ್ಕಿಂತ ಒಂದು ಮಿಗಿಲು. ಅವರ ಕ್ರಿಕೆಟ್ ಪುಸ್ತಕದಲ್ಲಿ ಎಲ್ಲ ನಮೂನೆಯ ಹೊಡೆತಗಳೂ ಇವೆ’ ಎಂದರು.
“ಭಾರತದ ಬೃಹತ್ ಮೊತ್ತಕ್ಕೆ ಅಥವಾ ಉಳಿಸಿಕೊಳ್ಳಬಹುದಾದ ಸ್ಕೋರ್ಗೆ ಸೂರ್ಯಕುಮಾರ್ ಆಟವೇ ಮುಖ್ಯ ಕಾರಣ. ಜಿಂಬಾಬ್ವೆ ವಿರುದ್ಧ ಅವರು ಅಜೇಯ 61 ರನ್ ಬಾರಿಸಿದ್ದರಿಂದಲೇ ಭಾರತ ಎಂಸಿಜಿಯಲ್ಲಿ ತನ್ನ ಸರ್ವಾಧಿಕ ಸ್ಕೋರ್ ದಾಖಲಿಸಿತು. ಇಲ್ಲವಾದರೆ ನೂರೈವತ್ತರ ಗಡಿಯನ್ನೂ ತಲುಪಲು ಸಾಧ್ಯವಿರಲಿಲ್ಲ’ ಎಂದರು.
ರಾಹುಲ್ ಫಾರ್ಮ್ ನಿರ್ಣಾಯಕ
“ನಾವೀಗ ಇಬ್ಬರು ಬ್ಯಾಟರ್ ಫಾರ್ಮ್ನ ಉತ್ತುಂಗದಲ್ಲಿರುವುದನ್ನು ಕಾಣುತ್ತಿದ್ದೇವೆ-ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್. ಇವರೊಂದಿಗೆ ಕೆ.ಎಲ್. ರಾಹುಲ್ ಕೂಡ ಮತ್ತೊಂದು ಅರ್ಧ ಶತಕ ಬಾರಿಸಿದ್ದು ಖುಷಿ ಕೊಡುವ ಸಂಗತಿ. ಅಕಸ್ಮಾತ್ ಸೂರ್ಯ ಸಿಡಿಯದೇ ಹೋದರೆ ಭಾರತಕ್ಕೆ ದೊಡ್ಡ ಮೊತ್ತ ಗಳಿಸಲಾಗದು. ಈ ಕಾರಣಕ್ಕಾಗಿ ಭಾರತಕ್ಕೆ ರಾಹುಲ್ ಫಾರ್ಮ್ ಕೂಡ ಬಹಳ ಮುಖ್ಯ’ ಎಂಬುದಾಗಿ ಗಾವಸ್ಕರ್ ಹೇಳಿದರು.
ನಾಯಕ ರೋಹಿತ್ ಶರ್ಮ ಅವರ ಬ್ಯಾಟಿಂಗ್ ವೈಫಲ್ಯದತ್ತಲೂ ಸುನೀಲ್ ಗಾವಸ್ಕರ್ ಬೆಟ್ಟು ಮಾಡಿದರು. “ರೋಹಿತ್ ಮುಂದಿನೆರಡು ಪಂದ್ಯಗಳಿಗೆ ತಮ್ಮ ರನ್ನುಗಳನ್ನು ಸಂಗ್ರಹಿಸಿ ಇರಿಸಿದ್ದಾರೆಂದು ಭಾವಿಸೋಣ’ ಎಂದರು.