ಚಿರಾಗ್ ಶೆಟ್ಟಿ-ರಾಂಕಿರೆಡ್ಡಿ ಜೋಡಿಗೆ ಕಿರೀಟ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್
Team Udayavani, Aug 5, 2019, 5:54 AM IST
ಬ್ಯಾಂಕಾಕ್: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ನೂತನ ಇತಿಹಾಸ ವೊಂದನ್ನು ಬರೆದಿದ್ದಾರೆ.
“ಬಿಡಬ್ಲ್ಯುಎಫ್ 500′ ಬ್ಯಾಡ್ಮಿಂಟನ್ ಡಬಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಜೋಡಿಯಾಗಿ ಹೊರಹೊಮ್ಮಿದ್ದಾರೆ. ಥಾಯ್ಲೆಂಡ್ ಓಪನ್ ಕೂಟದಲ್ಲಿ ಪುರುಷರ ಡಬಲ್ಸ್ ಚಾಂಪಿಯನ್ ಆಗುವ ಮೂಲಕ ಇವರು ನೂತನ ಮೈಲುಗಲ್ಲು ನೆಟ್ಟರು.
ರವಿವಾರ ನಡೆದ ಪ್ರಶಸ್ತಿ ಸೆಣಟಸಾದಲ್ಲಿ ಶ್ರೇಯಾಂಕ ರಹಿತ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಚೀನದ 3ನೇ ಶ್ರೇಯಾಂಕದ ಲೀ ಜುನ್ ಹ್ಯುಯಿ-ಲಿಯು ಯು ಚೆನ್ ವಿರುದ್ಧ ತೀವ್ರ ಹೋರಾಟ ನೀಡಿ 21-19, 18-21, 21-18 ಅಂಕಗಳ ರೋಚಕ ಜಯ ಸಾಧಿಸಿದರು.
ಆಂಧ್ರದ ರಾಂಕಿರೆಡ್ಡಿ- ಮುಂಬಯಿಯ ಚಿರಾಗ್ ಶೆಟ್ಟಿ ಪಾಲಿಗೆ ಇದು 2019ರ ಋತುವಿನ ಮೊದಲ ಫೈನಲ್ ಆಗಿತ್ತು. ಈ ಜೋಡಿ 2018ರ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಇದಕ್ಕೂ ಒಂದು ಹೆಜ್ಜೆ ಮುಂದಿದ್ದ ಚಿರಾಗ್ ಶೆಟ್ಟಿ ಮಿಕ್ಸೆಡ್ ಡಬಲ್ಸ್ನಲ್ಲಿ ಸ್ವರ್ಣ ಸಾಧನೆಗೈದಿದ್ದರು.
ಅಬ್ಬರದ ಆರಂಭ
ಭಾರತೀಯ ಜೋಡಿಯ ಆರಂಭ ಅಬ್ಬರ ದಿಂದ ಕೂಡಿತ್ತು. 3-3 ಸಮಬಲದ ಬಳಿಕ 10-6 ಮುನ್ನಡೆ ಲಭಿಸಿತು. ಆದರೆ ಇಲ್ಲಿಂದ ಮುಂದೆ ಚೀನಿ ಜೋಡಿ ತಿರುಗಿ ಬಿತ್ತು. ಅಂಕ 14-14 ಸಮ ಬಲಕ್ಕೆ ಬಂತು. ಕೊನೆಯಲ್ಲಿ 20-19 ಅಂತರ ದಿಂದ ಭಾರತದ ಜೋಡಿ ಮೇಲುಗೈ ಸಾಧಿಸಿತು.
ದ್ವಿತೀಯ ಗೇಮ್ನಲ್ಲೂ ರೆಡ್ಡಿ-ಶೆಟ್ಟಿ ಜೋಡಿಯೇ ಮುಂದಿತ್ತು. 6-2 ಮುನ್ನಡೆಯನ್ನು ತನ್ನದಾಗಿಸಿಕೊಂಡಿತ್ತು. ಬಳಿಕ ಚೀನಿ ಶಟ್ಲರ್ ಓವರ್ಟೇಕ್ ಮಾಡಿದರು. 18-16ರ ವೇಳೆ ಸತತ 5 ಅಂಕ ಗೆಲ್ಲುವ ಮೂಲಕ ಸ್ಪರ್ಧೆಯನ್ನು ಸಮಬಲಕ್ಕೆ ತಂದರು.
ನಿರ್ಣಾಯಕ ಗೇಮ್ನಲ್ಲಿ ಭಾರತೀಯರ ಆರಂಭ ತುಸು ನಿಧಾನ ಗತಿಯಿಂದ ಕೂಡಿತ್ತು. 6-6ರ ಸಮಬಲದ ಬಳಿಕ ಹಿಂತಿರುಗಿ ನೋಡಲಿಲ್ಲ.
ಉಡುಪಿ ಜಿಲ್ಲೆಯ ಉಚ್ಚಿಲ ಮೂಲದ ಚಿರಾಗ್ ಕುಟುಂಬ
ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಅಸಾಮಾನ್ಯ ಸಾಧನೆಗೈದ ಚಿರಾಗ್ ಶೆಟ್ಟಿ ಕುಟುಂಬ ಉಡುಪಿ ಜಿಲ್ಲೆಯ ಉಚ್ಚಿಲ ಮೂಲದ್ದಾಗಿದೆ. ಈಗ ಮುಂಬಯಿಯಲ್ಲಿ ನೆಲೆ ನಿಂತಿದೆ. ತಂದೆ ಚಂದ್ರಶೇಖರ್ ಎಲ್. ಶೆಟ್ಟಿ ವರ್ಷಕ್ಕೊಮ್ಮೆ ಕುಟುಂಬ ಕಾರ್ಯಗಳಿಗಾಗಿ ಉಚ್ಚಿಲಕ್ಕೆ ಬರುತ್ತಿರುತ್ತಾರೆ. ಆದರೆ ಚಿರಾಗ್ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲೇ. ಚಿರಾಗ್ ಊರಿಗೆ ಬಾರದೆ ಐದಾರು ವರ್ಷಗಳೇ ಕಳೆದಿವೆ.
ಸೆಮಿ ನಿರೀಕ್ಷೆ ಇತ್ತಷ್ಟೇ…
“ಚಿರಾಗ್ ಜೋಡಿ ಫೈನಲ್ಗೆ ಬರುತ್ತದೆ, ಚಿನ್ನದ ಪದಕ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ನಮಗಿರಲಿಲ್ಲ. ಈ ಜೋಡಿ ಹೆಚ್ಚೆಂದರೆ ಸೆಮಿಫೈನಲ್ ತನಕ ಬಂದೀತು ಎಂದು ಭಾವಿಸಿದ್ದೆವು. ವಿಶ್ವದ ಬಲಿಷ್ಠ ಜೋಡಿಯೆದುರು ಜಯಿಸಿದ್ದಕ್ಕೆ ಬಹಳ ಖುಷಿಯಾಗುತ್ತಿದೆ’ ಎಂದು ತಂದೆ ಚಂದ್ರಶೇಖರ್ ಶೆಟ್ಟಿ “ಉದಯವಾಣಿ’ ಜತೆ ಹೇಳಿಕೊಂಡರು.
“ಚಿರಾಗ್ಗೆ ಪ್ರಕಾಶ್ ಪಡುಕೋಣೆಯೇ ಸ್ಫೂರ್ತಿ. ನಾನು ಗೋರೆಗಾಂವ್ ನ್ಪೋರ್ಟ್ಸ್ ಕ್ಲಬ್ನ ಸದಸ್ಯನಾಗಿದ್ದೇನೆ. ಚಿರಾಗ್ 6 ವರ್ಷದವನಿರುವಾಗಲೇ ಈ ಕ್ಲಬ್ಗ ಕರೆದುಕೊಂಡು ಹೊಗುತ್ತಿದ್ದೆ. ಇಲ್ಲಿ ಆಡುತ್ತಲೇ ಆತ ಬೆಳೆಯುತ್ತ ಈ ಮಟ್ಟಕ್ಕೆ ಬಂದಿದ್ದಾನೆ. ಈವರೆಗೆ ಭಾರತದ ಬ್ಯಾಡ್ಮಿಂಟನ್ ಆಟಗಾರರ್ಯಾರೂ ಮಾಡದ ಸಾಧನೆಯನ್ನು ನನ್ನ ಮಗ ಮಾಡಿದ್ದಾನೆ ಎಂಬುದು ಹೆಮ್ಮೆಯ ಸಂಗತಿ’ ಎಂದು ಚಂದ್ರಶೇಖರ್ ಶೆಟ್ಟಿ ಹೇಳಿದರು.
“ಚಿರಾಗ್ ಒಲಿಂಪಿಕ್ಸ್ನಲ್ಲೂ ಪದಕ ಗೆಲ್ಲಬೇಕೆಂಬುದು ನಮ್ಮ ಆಸೆ. ಆದರೆ ಇಲ್ಲಿ ಚಿನ್ನ ಗೆದ್ದರೂ ಒಲಿಂಪಿಕ್ಸ್ ಗೆ ಪ್ರವೇಶ ಪಡೆಯುವುದು ಅಷ್ಟು ಸುಲಭವಲ್ಲ’ ಎಂದು ಚಂದ್ರಶೇಖರ್ ಶೆಟ್ಟಿ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ