ಮಂದಹಾಸ ಮೂಡಿಸಿದ ಹಾಸನದ ಸುಹಾಸ್
Team Udayavani, Sep 4, 2021, 9:28 PM IST
ಬೆಂಗಳೂರು: ಕರ್ನಾಟಕದ ಹಾಸನ ಜಿಲ್ಲೆಯವರಾದ ಸುಹಾಸ್ ಲಾಲಿನಕೆರೆ ಯತಿರಾಜ್ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ಫೈನಲ್ಗೆ ಏರಿದ್ದು, ಇತಿಹಾಸದ ಹೊಸ್ತಿಲಲ್ಲಿದ್ದಾರೆ. ರವಿವಾರ ಮುಂಜಾನೆ ಅವರು ಸೋಲಲಿ, ಗೆಲ್ಲಲಿ, ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಗೌರವ ಪಡೆಯಲಿದ್ದಾರೆ.
38 ವರ್ಷದ ಸುಹಾಸ್ ಪ್ರಸ್ತುತ ಉತ್ತರಪ್ರದೇಶದ ಗೌತಮಬುದ್ಧ ನಗರದ (ನೋಯ್ಡಾ) ಜಿಲ್ಲಾಧಿಕಾರಿ. ಸದ್ಯ ಅವರೀಗ ಎಸ್ಎಲ್4 ವಿಭಾಗದಲ್ಲಿ ವಿಶ್ವದ ನಂ.3 ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ.
ಟೋಕಿಯೊ ಸೆಮಿಫೈನಲ್ ಸೇರಿದಂತೆ ಆಡಿದ ಮೂರೂ ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಗೆಲ್ಲಲು 20 ನಿಮಿಷ ತೆಗೆದುಕೊಂಡಿದ್ದರೆ, ಸೆಮಿಫೈನಲ್ನಲ್ಲಂತೂ ಇಂಡೊನೇಶ್ಯದ ಫ್ರೆಡಿ ಸೆತಿಯವಾನ್ ವಿರುದ್ಧ ಕೇವಲ 31 ನಿಮಿಷಗಳಲ್ಲಿ ಗೆದ್ದಿದ್ದಾರೆ. ಗೆಲುವಿನ ಅಂತರ 21-9, 21-15. ಇದರಿಂದ ಅಂತಿಮ ಪಂದ್ಯದಲ್ಲೂ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್, ದುರ್ಬಲ ಕಾಲನ್ನು ಹೊಂದಿದ್ದಾರೆ. ಕಾಲಿನಲ್ಲಿ ತೀವ್ರ ಬಲಹೀನತೆಯಿದ್ದರೆ ಅಂತಹವರನ್ನು ಎಸ್ಎಲ್4 ವಿಭಾಗಕ್ಕೆ ಸೇರಿಸಲಾಗುತ್ತದೆ. ಇಂತಹ ಸಮಸ್ಯೆಗಳ ಮಧ್ಯೆಯೂ ಸುಹಾಸ್ ಐಎಎಸ್ ಅಧಿಕಾರಿಯಾಗಿದ್ದಾರೆ.
ಸುರತ್ಕಲ್ನಲ್ಲಿ ಎಂಜಿನಿಯರಿಂಗ್ :
ಮೂಲತಃ ಸುಹಾಸ್ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ. ಪದವಿ ಪಡೆದದ್ದು ಸುರತ್ಕಲ್ನ ಎನ್ಐಟಿಕೆಯಲ್ಲಿ. ಜತೆಗೆ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಅದ್ಭುತ ಸಾಧನೆಗೈದಿದ್ದಾರೆ. ಸುಹಾಸ್ ಸಾಧನೆಗೆ ಐಎಎಸ್ ಅಧಿಕಾರಿಗಳ ಸಂಘ, ಸಾಮಾಜಿಕ ತಾಣಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸದ್ಯ ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಇದಕ್ಕೂ ಮುನ್ನ ಪ್ರಯಾಗ್ರಾಜ್, ಆಗ್ರಾ, ಅಝಮ್ಗಢ, ಜೌನ್ಪುರ, ಸೋನಭದ್ರಾದಲ್ಲೂ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕೊರೊನಾ ನಿಗ್ರಹಕ್ಕೆ ಅವಿರತವಾಗಿ ದುಡಿದಿದ್ದಾರೆ.
ರಾತ್ರಿ ಹತ್ತರಿಂದ ಅಭ್ಯಾಸ! :
ಒಂದು ಕಡೆ ಕೊರೊನಾ, ಅದನ್ನು ನಿಭಾಯಿಸಬೇಕಾಗಿರುವ ಗುರುತರ ಜಿಲ್ಲಾಧಿಕಾರಿಯ ಹೊಣೆ. ಇದರ ನಡುವೆ ಪ್ಯಾರಾಲಿಂಪಿಕ್ಸ್ಗೆ ತಯಾರಾಗುವುದು ಹೇಗೆ? ಇದು ಅವರು ಟೋಕಿಯೊ ವಿಮಾನ ಹತ್ತುವುದಕ್ಕಿಂತ ಮುನ್ನ ಪತ್ರಕರ್ತರ ಪ್ರಶ್ನೆಯಾಗಿತ್ತು. ಇದಕ್ಕೆ ಅವರು ಕೊಟ್ಟ ಉತ್ತರ ಬಹಳ ಕುತೂಹಲಕರವಾಗಿದೆ.
“ನಾನು ದಿನವಿಡೀ ಕೊರೊನಾ ನಿಗ್ರಹ ಹಾಗೂ ಆಡಳಿತಾತ್ಮಕ ಸಂಗತಿಗಳಿಗಾಗಿ ಕರ್ತವ್ಯ ನಿರ್ವಹಿಸುತ್ತೇನೆ. ರಾತ್ರಿ ಹತ್ತರ ಅನಂತರ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೇನೆ. ಆಡಳಿತಾಧಿಕಾರಿಯಾಗಿ, ಆಟಗಾರನಾಗಿ ಎರಡೂ ಜವಾಬ್ದಾರಿಯನ್ನು ಕಳೆದ 6 ವರ್ಷಗಳಿಂದ ಸರಿಯಾಗಿಯೇ ನಿಭಾಯಿಸುತ್ತಿದ್ದೇನೆ’ ಎಂದಿದ್ದರು ಸುಹಾಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ