ಧೋನಿ ನೆರವಿಗೆ ನಿಂತ ಕೊಹ್ಲಿ
Team Udayavani, Nov 9, 2017, 6:45 AM IST
ತಿರುವನಂತಪುರ: ಗ್ರೇಟ್ ಫಿನಿಶರ್ ಖ್ಯಾತಿಯ ಎಂಎಸ್ ಧೋನಿ ಅವರ ಇತ್ತೀಚೆಗಿನ ಫಿನಿಶಿಂಗ್ ವೈಫಲ್ಯದ ಬಗ್ಗೆ ಟೀಕೆಗಳಿಗೆ ಉತ್ತರಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸ್ವತಃ ನನ್ನ ಸಹಿತ ಇತರ ಆಟಗಾರರ ವೈಫಲ್ಯವನ್ನು ಕಡೆಗಣಿಸಿ ಓರ್ವ ವ್ಯಕ್ತಿ ಬಗ್ಗೆ ಯಾಕೆ ನಿರಂತರವಾಗಿ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ದ್ವಿತೀಯ ಟ್ವೆಂಟಿ20 ಪಂದ್ಯದಲ್ಲಿ ಧೋನಿ 37 ಎಸೆತಗಳಿಂದ 49 ರನ್ ಗಳಿಸಿದ್ದರು. ಆದರೂ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋಲನ್ನು ಕಂಡಿತ್ತು. ಧೋನಿ ಅವರು ಬಹಳಷ್ಟು ಡಾಟ್ ಎಸೆತ ಆಡಿದ್ದರು ಎಂದು ಟೀಕಾಕಾರರು ಹೇಳುವ ಮೂಲಕ ಅವರ ವೈಫಲ್ಯವನ್ನು ಎತ್ತಿ ತೋರಿಸಿದ್ದರು.
ಟ್ವೆಂಟಿ20ಯಲ್ಲಿ ಯುವ ಆಟಗಾರನೋರ್ವನನ್ನು ಆಡಿಸಬಹುದಿತ್ತು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದರೆ ವೀರೇಂದ್ರ ಸೆಹವಾಗ್ ಅವರು ತಂಡದಲ್ಲಿ ತನ್ನ ಪಾತ್ರದ ಬಗ್ಗೆ ಮಾಜಿ ನಾಯಕ ಅರ್ಥಮಾಡಿಕೊಳ್ಳಬೇಕು ಎಂದು ನುಡಿದಿದ್ದರು.
ಜನರೆಲ್ಲ ಅವರ ಬಗ್ಗೆ ಮಾತ್ರ ಯಾಕೆ ಹೀಗೆ ಹೇಳುತ್ತಾರೆಂದು ಗೊತ್ತಾಗುತ್ತಿಲ್ಲ. ಬ್ಯಾಟ್ಸ್ಮನ್ ಆಗಿ ನಾನು ಮೂರು ಬಾರಿ ವೈಫಲ್ಯ ಕಂಡರೂ ಯಾರೂ ಕೂಡ ನನ್ನ ವೈಫಲ್ಯದ ಬಗ್ಗೆ ಹೇಳುವುದಿಲ್ಲ. ಯಾಕೆಂದರೆ ನನಗೆ 35 ವರ್ಷ ಆಗಿಲ್ಲವಲ್ಲ ಎಂದು ಕೊಹ್ಲಿ ವ್ಯಂಗ್ಯವಾಗಿ ಹೇಳಿದರು.
ಅವರು ಫಿಟ್ ಆಗಿದ್ದಾರೆ. ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಮೈದಾನದಲ್ಲಿ ಎಲ್ಲ ವಿಧಗಳಲ್ಲಿ ಅವರು ತಂಡಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಅವರು ಶ್ರೀಲಂಕಾ ಮತ್ತು ಆಸ್ಟ್ರೇಲಿಯ ವಿರುದ್ಧ ನಿಜವಾಗಿಯೂ ಉತ್ತಮ ನಿರ್ವಹಣೆ ನೀಡಿದ್ದರು ಎಂದು ಕೊಹ್ಲಿ ತಿಳಿಸಿದರು.
ಧೋನಿ ಬಗ್ಗೆ ಟೀಕೆ ಮಾಡುವವರು ಖಂಡಿತವಾಗಿಯೂ ಅವರು ಯಾವ ಸಮಯದಲ್ಲಿ ಬ್ಯಾಟಿಂಗ್ಗೆ ಆಗಮಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಸರಣಿಯಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚು ಸಮಯ ಸಿಕ್ಕಿಲ್ಲ. ಯಾವ ಕ್ರಮಾಂಕದಲ್ಲಿ ಅವರು ಬ್ಯಾಟಿಂಗಿಗೆ ಬರುತ್ತಾರೆ ಎಂಬುದನ್ನು ತಿಳಿಯಬೇಕು. ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಮಾಡಿಲ್ಲ. ಹಾಗಾಗಿ ಯಾಕೆ ಓರ್ವ ವ್ಯಕ್ತಿಯನ್ನು ಬೊಟ್ಟು ಮಾಡಿ ಹೇಳುತ್ತೀರಿ. ಇದು ಸರಿಯಲ್ಲ ಎಂದು ಕೊಹ್ಲಿ ವಿವರಿಸಿದರು.
ಒತ್ತಡದ ಸನ್ನಿವೇಶ
ಧೋನಿ ಬ್ಯಾಟಿಂಗಿಗೆ ಬರುವಾಗ ಇರುವ ಒತ್ತಡದ ಸನ್ನಿವೇಶವನ್ನು ಕೊಹ್ಲಿ ಸವಿವರರಾಗಿ ವಿವರಿಸಿದರು. ಅವರು ಬ್ಯಾಟಿಂಗಿಗೆ ಬರುವ ಸಮಯದಲ್ಲಿ ರನ್ರೇಟ್ ಓವರೊಂದಕ್ಕೆ 8.5ರಿಂದ 9.5ರಷ್ಟು ಇರುತ್ತದೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವುದಕ್ಕಿಂತ ಭಿನ್ನವಾಗಿ ಪಿಚ್ ಕೂಡ ಇರುತ್ತದೆ. ಅಗ್ರ ಕ್ರಮಾಂಕದದಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ಬಳಿಕ ಸುಲಭವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿರುತ್ತದೆ. ಆದರೆ ಕೆಳಗಿನ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್ಮನ್ ಒತ್ತಡದಿಂದಲೇ ಆಡಬೇಕಾಗುತ್ತದೆ ಎಂದು 29ರ ಹರೆಯದ ಕೊಹ್ಲಿ ಹೇಳಿದರು.
ನಾವು ಪ್ರತಿಯೊಂದು ವಿಷಯವನ್ನು ಗಮನಿಸಬೇಕಾಗುತ್ತದೆ. ತಂಡದ ಸದಸ್ಯರು ಮತ್ತು ವ್ಯವಸ್ಥಾಪಕರು. ಬ್ಯಾಟಿಂಗ್ ಮಾಡಲು ಹೋಗುವಾಗ ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಜನರ ಅಭಿಪ್ರಾಯದಿಂದ ನಾವು ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ಪಿಚ್ ಹೇಗೆ ವರ್ತಿಸುತ್ತದೆ ಮತ್ತು ನಾವು ಯಾವ ಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ತಿಳಿದು ಆಡಬೇಕಾಗುತ್ತದೆ ಎಂದು ಕೊಹ್ಲಿ ನುಡಿದರು.
ಮೂರು ಏಕದಿನ ಪಂದ್ಯಗಳಲ್ಲಿ ಧೋನಿ ಅನುಕ್ರಮವಾಗಿ 25, 18 ಔಟಾಗದೆ ಮತ್ತು 25 ರನ್ ಗಳಿಸಿದ್ದರು. ಟ್ವೆಂಟಿ20ಯಲ್ಲಿ 7 ಔಟಾಗದೆ, 49 ಮತ್ತು 0 ಔಟಾಗದೆ ರನ್ ಮಾಡಿದ್ದರು. ಇದರಿಂದ ಕೊಹ್ಲಿಗೆ ಯಾವುದೇ ಚಿಂತೆಯಾಗಿಲ್ಲ.
ಅವರು ನಿಜವಾಗಿಯೂ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ತನ್ನ ಆಟದ ಬಗ್ಗೆ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ತನ್ನ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ ಪ್ರತಿ ಬಾರಿಯೂ ಒಳ್ಳೆಯ ನಿರ್ವಹಣೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಅವರು ದಿಲ್ಲಿಯಲ್ಲಿ ಸಿಕ್ಸರ್ ಬಾರಿಸಿದ್ದರು ಮತ್ತು ಅದನ್ನು ಪಂದ್ಯ ಮುಗಿದ ಬಳಿಕ ಐದು ಬಾರಿ ತೋರಿಸಿದರು. ಮುಂದಿನ ಪಂದ್ಯದಲ್ಲಿ ಅವರು ವಿಫಲರಾದಾಗ ವೈಫಲ್ಯವೆಂದು ಬಣ್ಣಿಸಿದರು ಎಂದು ಕೊಹ್ಲಿ ವಿವರಿಸಿದರು.
ಧೋನಿ ಅವರ ವಿಷಯಕ್ಕೆ ಬಂದಾಗ ನಾವು ತಾಳ್ಮೆ ವಹಿಸುವುದು ಅಗತ್ಯ ಮತ್ತು ಅವರ ಕೊಡುಗೆ ಭಾರತ ತಂಡಕ್ಕೆ ಯಾವಾಗಲೂ ಬೇಕಾಗಿದೆ ಎಂದು ಕೊಹ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ