ನಾಲ್ಕನೆ ಟೆಸ್ಟ್; ಬ್ಯಾಟಿಂಗ್ ಗೆ ಬಾರದ ಶ್ರೇಯಸ್ ಅಯ್ಯರ್; ಕಾರಣವೇನು?
Team Udayavani, Mar 12, 2023, 11:42 AM IST
ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ನಡೆಯುತ್ತಿದ್ದು, ಭಾರತ ಉತ್ತಮ ಸ್ಥಿತಿಯಲ್ಲಿದೆ. ಆದರೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಬ್ಯಾಟಿಂಗ್ ಗೆ ಇಳಿಯದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ರವೀಂದ್ರ ಜಡೇಜಾ ಅವರು ಔಟಾದ ಬಳಿಕ ಶ್ರೇಯಸ್ ಅಯ್ಯರ್ ಅವರು ಬ್ಯಾಟಿಂಗ್ ಗೆ ಇಳಿಯಬೇಕಿತ್ತು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಆಡಲಿಳಿದರು.
ಇದನ್ನೂ ಓದಿ:ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ದೇವಾಲಯದಲ್ಲಿ ಕಳ್ಳತನ
ಇದೀಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೇಯಸ್ ಅಯ್ಯರ್ ಅವರ ಅಲಭ್ಯತೆ ಬಗ್ಗೆ ಅಪ್ಡೇಟ್ ನೀಡಿದೆ. ಅಯ್ಯರ್ ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಸ್ಕ್ಯಾನ್ ಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದೆ.
ಮೂರನೇ ದಿನದ ಆಟದ ನಂತರ ಶ್ರೇಯಸ್ ಅಯ್ಯರ್ ತಮ್ಮ ಬೆನ್ನಿನ ಕೆಳಭಾಗದಲ್ಲಿ ನೋವಿನಿಂದ ಬಳಲುತ್ತಿದ್ದರು. ಅವರು ಸ್ಕ್ಯಾನ್ ಗೆ ತೆರಳಿದ್ದು, ಬಿಸಿಸಿಐ ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ ಎಂದು ವರದಿ ತಿಳಿಸಿದೆ.
ಆದರೆ, ಅವರು ಬ್ಯಾಟಿಂಗ್ಗೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ.
ಅಯ್ಯರ್ ಅವರು ಬೆನ್ನುನೋವಿನ ಕಾರಣ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಕಳೆದು ಕೊಂಡಿದ್ದರು.