ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾಗೆ ಮುಚ್ಚಿತೇ ಭಾರತ ತಂಡದ ಬಾಗಿಲು.. !
Team Udayavani, Feb 10, 2022, 11:37 AM IST
ಕೋಲ್ಕತ್ತಾ: ಭಾರತ ಟೆಸ್ಟ್ ತಂಡದ ಪ್ರಮುಖ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಅಂತಾರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿದೆಯಾ? ಹೀಗೊಂದು ಪ್ರಶ್ನೆ ಇದೀಗ ಉದ್ಭವಿಸಿದೆ.
ಬಿಸಿಸಿಐನ ಅತ್ಯಂತ ಪ್ರಭಾವಿ ಮೂಲಗಳು ವೃದ್ಧಿಮಾನ್ಗೆ, ಇನ್ನು ಮುಂದೆ ಟೆಸ್ಟ್ ತಂಡಕ್ಕೆ ನಿಮ್ಮ ಅಗತ್ಯವಿಲ್ಲ. ನಾವು ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದರಿಂದ ಹೊಸಬರ ಆಯ್ಕೆಗೆ ಚಿಂತಿಸಿದ್ದೇವೆ ಎಂದಿದ್ದಾರೆನ್ನಲಾಗಿದೆ.
ವಿಶ್ವದ ಪ್ರಮುಖ ಕೀಪರ್ ಆಗಿದ್ದರೂ ಹೀಗೊಂದು ಪ್ರತಿಕ್ರಿಯೆ ಪಡೆದಿರುವುದು ವೃದ್ಧಿಮಾನ್ ಗೆ ಬೇಸರ ಮೂಡಿಸಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರು ಬಂಗಾಳ ರಣಜಿ ತಂಡದಿಂದಲೂ ಹೊರಗುಳಿದಿದ್ದಾರೆ.
ವೈಯಕ್ತಿಕ ಕಾರಣಗಳಿಗಾಗಿ ಈ ಋತುವಿನಲ್ಲಿ ರಣಜಿ ಟ್ರೋಫಿಯನ್ನು ಆಡುವುದಿಲ್ಲ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ಮತ್ತು ಜಂಟಿ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಅವರಿಗೆ ವೃದ್ಧಿಮಾನ್ ಸಾಹಾ ತಿಳಿಸಿದ್ದರು.
ಇದನ್ನೂ ಓದಿ:ಇತ್ತೀಚಿನ ವರ್ಷಗಳಲ್ಲಿ ಇಂತಹ ಬೌಲಿಂಗ್ ದಾಳಿ ನೋಡಿಲ್ಲ: ಪ್ರಸಿಧ್ ಗೆ ರೋಹಿತ್ ಮೆಚ್ಚುಗೆ
ಭಾರತ ತಂಡದಲ್ಲಿ ಸದ್ಯ ರಿಷಭ್ ಪಂತ್ ಅವರನ್ನು ಪ್ರಮುಖ ಕೀಪರ್ ಆಗಿ ಆಯ್ಕೆ ಮಾಡಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಂತ್ ಅವರ ಬ್ಯಾಟಿಂಗ್. ಅಲ್ಲದೆ ಎರಡನೇ ಕೀಪರ್ ಆಗಿ ಕೆಎಸ್ ಭರತ್ ಅವರನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ.
37 ವರ್ಷದ ವೃದ್ಧಿಮಾನ್ ಸಾಹಾ ಅವರ ಅಂತಾರಾಷ್ಟ್ರೀಯ ಜೀವನ ಬಹುತೇಕ ಅಂತ್ಯವಾಗಿದೆ. ಮಾಜಿ ನಾಯಕ ಎಂ.ಎಸ್.ಧೋನಿ ಅವರ ನಿವೃತ್ತಿಯ ಬಳಿಕ ಸಾಹಾ ಮೊದಲ ಆಯ್ಕೆಯ ಕೀಪರ್ ಆಗಿದ್ದರು. ಆದರೆ ಸಾಹಾ ಬ್ಯಾಟಿಂಗ್ ಪ್ರದರ್ಶನ ಕುಸಿದ ಕಾರಣ ರಿಷಭ್ ಪಂತ್ ಆಯ್ಕೆಯಾಗಿದ್ದರು.