Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ಮುಂದಿನ 5 ದಿನಗಳ ಕಾಲ ಬಹುತೇಕ ಕಡೆ 2-3 ಡಿ.ಸೆ. ಉಷ್ಣಾಂಶ ಏರಿಕೆ?
Team Udayavani, Apr 18, 2024, 6:50 AM IST
ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯಾದ್ಯಂತ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಉತ್ತರ ಒಳನಾಡು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ 35ರಿಂದ 38 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ ರಾಜ್ಯದ ಉತ್ತರ ಕರ್ನಾಟಕದಲ್ಲಿ ಮತ್ತೆ ತಾಪಮಾನ ಏರಿಕೆಯಾಗಿದ್ದು, ಬುಧವಾರ ಕಲಬುರಗಿಯಲ್ಲಿ 41.4, ರಾಯಚೂರು 40.8, ಬೆಂಗಳೂರು 36.7, ಬಾಗಲಕೋಟೆಯಲ್ಲಿ 39.8, ಮಂಡ್ಯದಲ್ಲಿ 38.6, ದಾವಣಗೆರೆಯಲ್ಲಿ 39.7, ಚಾಮರಾಜನಗರ 37.4, ಚಿತ್ರದುರ್ಗ 38.5 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಉಷ್ಣಾಂಶ ಏರಿಕೆ ಏಕೆ?
ಮರಾಠವಾಡದಿಂದ ದಕ್ಷಿಣ ಒಳಭಾಗದ ಕರ್ನಾಟಕದವರೆಗಿನ ಟ್ರಫ್ ಈಗ ದಕ್ಷಿಣ ವಿದರ್ಭದಿಂದ ದಕ್ಷಿಣ ಒಳಭಾಗಕ್ಕೆ ಹಾದು ಹೋಗುತ್ತದೆ. ಕರ್ನಾಟಕವು ಮರಾಠವಾಡದಿಂದ ಮತ್ತು ಉತ್ತರ ಆಂತರಿಕ ಕರ್ನಾಟಕದ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಮನ್ನಾರ್ ಕೊಲ್ಲಿಯಿಂದ ದಕ್ಷಿಣ ತೆಲಂಗಾಣದವರೆಗೆ ತಮಿಳುನಾಡು ಮತ್ತು ರಾಯಲಸೀಮಾದ ಒಳಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿ ಒಂದು ಟ್ರಫ್ ಹಾದು ಹೋಗುತ್ತದೆ.
ತಮಿಳುನಾಡಿನ ಉತ್ತರ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಡಿಮೆಯಾಗಿದೆ ಎಂದು ಗುರುತಿಸಲಾಗಿದೆ. ಇದರಿಂದ ಗರಿಷ್ಠ ಉಷ್ಣಾಂಶವು 2ರಿಂದ 3 ಡಿ.ಸೆ. ಏರಿಕೆಯಾಗುವ ಲಕ್ಷಣ ಗೋಚರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧೆಡೆ ಮಳೆಯಾಗುವ ಸಾಧ್ಯತೆ
ಗುರುವಾರ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೆೇರಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧಯತೆಯಿದೆ. ಎ. 18ರಂದು ಧಾರವಾಡ, ಗದಗ, ಬೆಳಗಾವಿ, ವಿಜಯಪುರ ಮತ್ತು ಹಾವೇರಿ ಜಿಲ್ಲೆ ಗಳಲ್ಲಿ ಹಾಗೂ ಎ. 19ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಕರಾವಳಿ ಕರ್ನಾಟಕದ ಜಿಲ್ಲೆಗಳು, ಬೀದರ್, ಕಲಬುರಗಿ, ವಿಜಯಪುರ, ಗದಗ ಮತ್ತು ರಾಯಚೂರು, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸಿಡಿಲು, ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಗಳಿವೆ. ಜತೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.