ಅರ್ಚಕರನ್ನು ವಿವಾಹ ಆಗುವವರಿಗೆ 3 ಲ.ರೂ.!
Team Udayavani, Jan 6, 2021, 11:34 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಅರ್ಚಕರು ಹಾಗೂ ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ 3 ಲ.ರೂ.ಯ ಬಾಂಡ್ ನೀಡುವ “ಮೈತ್ರಿ’ ಹಾಗೂ ಬಡ ಬ್ರಾಹ್ಮಣ ಹೆಣ್ಣು ಮಕ್ಕಳ ವಿವಾಹಕ್ಕೆ ಮಾಂಗಲ್ಯ ಭಾಗ್ಯ ಕಲ್ಪಿಸಲು 25 ಸಾ. ರೂ. ನೆರವು ನೀಡುವ “ಅರುಂಧತಿ ಯೋಜನೆ’ಯನ್ನು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಾರಿಗೆ ತಂದಿದೆ.
ಪ್ರಸಕ್ತ ವರ್ಷ 30 ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗುವ ಯುವತಿಯರಿಗೆ ಮೈತ್ರಿ ಮತ್ತು 300 ಯುವತಿಯರಿಗೆ “ಅರುಂಧತಿ’ ಯೋಜನೆ ನೆರವು ದೊರೆಯಲಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದರು.
ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗಲು ಯುವತಿಯರು ಹಿಂದೇಟು ಹಾಕುತ್ತಾರೆ. ಹೀಗಾಗಿ, ಅವರ ಜೀವನ ಭದ್ರತೆಗೆ ಮೈತ್ರಿ ಯೋಜನೆ ರೂಪಿಸಲಾಗಿದೆ. ಕೆಲವು ಷರತ್ತುಗಳ ಆಧಾರದ ಮೇಲೆ ಪ್ರತಿ ವರ್ಷ ಒಂದು ಲಕ್ಷ ರೂ.ಯಂತೆ 3 ವರ್ಷದ ವರೆಗೆ ನೀಡಲಾಗುವುದು. ಮುಂದಿನ ವರ್ಷ “ಮೈತ್ರಿ’ ಯೋಜನೆಯನ್ನು 500 ಮಂದಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನಷ್ಟು ಸಹಾಯ
ಬ್ರಾಹ್ಮಣರ ಮಕ್ಕಳಿಗೆ ವೇದ ಕಲಿಸಲು ದೇವತಾರ್ಚನೆ, ಸ್ವಯಂ ಉದ್ಯೋಗ ಕೈಗೊಳ್ಳಲು 25 ಸಾ. ರೂ.ನಿಂದ 7.50 ಲ. ರೂ.ವರೆಗೆ ಸಾಲ, ಶೇ.20ರಷ್ಟು ಸಬ್ಸಿಡಿ ನೀಡುವ “ಪುರುಷೋತ್ತಮ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಆರ್ಥಿಕ ನೆರವು ನೀಡಿ ಈ ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದು ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.