ಡಿಕೆಶಿ ವಿರುದ್ಧ ಹರಿಹಾಯ್ದ ಅನಂತ ಕುಮಾರ್ ಹೆಗಡೆ
Team Udayavani, Dec 28, 2019, 3:06 AM IST
ಬೆಂಗಳೂರು: ಕಪಾಲ ಬೆಟ್ಟದಲ್ಲಿ ಅತಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಸಂಸದ ಅನಂತ ಕುಮಾರ್ ಹೆಗಡೆ ಅವರು ಸರಣಿ ಟ್ವೀಟ್ ಮಾಡಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಅನಂತ ಕುಮಾರ್ ಹೆಗಡೆ ಅವರು ಗುರುವಾರ ರಾತ್ರಿ ಟ್ವೀಟ್ ಮಾಡಿ, “ಇಲ್ಲೊಬ್ಬ ತಿಹಾರ್ ರಿಟರ್ನ್ಡ್ ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಓಲೈಕೆ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್ನಲ್ಲಿ ಇನ್ನೂ ಹೆಚ್ಚಿನ ಗುಲಾಮರು ಅಖಾಡಕ್ಕೆ ಇಳಿದರೂ ಅಚ್ಚರಿಯಿಲ್ಲ’ ಎಂದು ಹೇಳಿದ್ದರು.
ಶುಕ್ರವಾರವೂ ಟ್ವೀಟ್ ಸರಣಿ ಮುಂದುವರಿಸಿದ ಅನಂತ ಕುಮಾರ್ ಹೆಗಡೆ, “ಕ್ರೈಸ್ತರಾಗಿ ಮತಾಂತರ ಹೊಂದಿದವರಿಗೆ ಮಾತ್ರ ಕಾಂಗ್ರೆಸ್ನಲ್ಲಿ ಇಟಲಿಯಮ್ಮ ಮಣೆ ಹಾಕುವುದು. ಈ ಸಂಪ್ರದಾಯ ಅರಿಯದ ಆ ಪಕ್ಷದ ಬಾಕಿ ನಾಯಕರು ಈಗಲಾದರೂ ಆತ್ಮ-ಸಾಕ್ಷಿ ಇದ್ದಲ್ಲಿ ತಮ್ಮ ಗುಲಾಮಿ ಮನೋಭಾವವನ್ನು ತಿರಸ್ಕರಿಸಿ, ಆ ಪಕ್ಷದ ವ್ಯವಸ್ಥೆಯನ್ನು ಧಿಕ್ಕರಿಸಿ ಹೊರ ಬರಲಿ!’ ಎಂದು ಕರೆ ನೀಡಿದ್ದರು.
ಡಿಕೆಶಿ ತಿರುಗೇಟು:”ಇದಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಬೆಳಗ್ಗೆ ಟ್ವೀಟ್ನಲ್ಲೇ ಪ್ರತಿಕ್ರಿಯಿಸಿ, “ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು ನಾನು. ನನ್ನ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದ ಜನರೂ ಇದ್ದಾರೆ. ಅವರ ಭಾವನೆ ಗೌರವಿಸುವುದು ನನ್ನ ಧರ್ಮ. ಡಾ.ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.