ಮದುವೆ ಮನೆಯಲ್ಲಿ “ಮಳೆಕೊಯ್ಲು’ ಜಾಗೃತಿ
Team Udayavani, Jun 24, 2019, 3:00 AM IST
ಮಂಗಳೂರು: ಮದುವೆ ಸೇರಿ ಶುಭ ಸಮಾರಂಭಗಳು ಉಪಯುಕ್ತ ಮಾಹಿತಿ ನೀಡುವ ಕಾರ್ಯಕ್ರಮಗಳಾಗಬೇಕೆಂಬ ಉದ್ದೇಶದಿಂದ ನರನ್ಸ್ ಸಮೂಹ ಸಂಸ್ಥೆಯ ಮಾಲಿಕ ರಾಮ ಭಟ್ ನಿಡ್ಲೆ ಮತ್ತು ಸರಸ್ವತಿ ರಾಮ್ ದಂಪತಿ ಮಗನ ಮದುವೆ ಸಮಾರಂಭದಲ್ಲಿ “ಮಳೆ ನೀರು ಕೊಯ್ಲು’ ವಿಷಯದ ಬಗ್ಗೆ ಜಾಗೃತಿ ನೀಡಲಾಯಿತು.
ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಭಾನುವಾರ ಮಹೇಶ್ ಮತ್ತು ಸವಿತಾ ಅವರ ಮದುವೆ ನಡೆದಿದ್ದು, ಆಗಮಿಸಿದ ಮಂದಿ ಮಳೆನೀರು ಕೊಯ್ಲು ಮತ್ತು ಪರಿಸರ ಜಾಗೃತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ನಗರದಲ್ಲಿ ನೀರಿಗೆ ಹಾಹಾಕಾರವಿತ್ತು.
ಹೀಗಿರುವಾಗ ಮಳೆ ನೀರನ್ನು ಸುಮ್ಮನೆ ಪೋಲು ಮಾಡಲು ಬಿಡದೆ ಸಂರಕ್ಷಿಸಬೇಕು ಎಂದು ಜಾಗೃತಿ ಸಾರುವ ಕರಪತ್ರವನ್ನು ಇದೇ ವೇಳೆ ಹಂಚಲಾಯಿತು. ಜತೆಗೆ, ಕಲ್ಲಡ್ಕ ಶ್ರೀರಾಮ ಶಾಲೆ ಪರಿಸರದಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಉದ್ದೇಶದಿಂದ ನರನ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮ ಭಟ್ ನಿಡ್ಲೆ ಅವರು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ದೇಣಿಗೆ ನೀಡಿದರು.