ಪರಿಷತ್ ಘನತೆ ಉಳಿಸಲು ಬದ್ಧ: ಬಸವರಾಜ ಹೊರಟ್ಟಿ
Team Udayavani, Jan 14, 2022, 7:50 AM IST
ಬೆಂಗಳೂರು: ವಿಧಾನ ಪರಿಷತ್ತಿನ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದು, ಪರಿಷತ್ತಿನ ಮಹತ್ವವನ್ನು ಉಳಿಸಲು ಬದ್ಧರಾಗಿರುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮ ಜಾರಿಗೊಳಿಸಿದ ಬಳಿಕ ವಿಧಾನಸೌಧದಲ್ಲಿ ನಿಯಮ ಪಾಲನೆ ಕುರಿತು ಪರಿಶೀಲಿಸಿದ್ದು, ವಿಧಾನ ಪರಿಷತ್ ಸಿಬಂದಿಗೆ ಮುಕ್ತವಾಗಿ ಕುಳಿತು ಕೆಲಸ ಮಾಡಲು ಕೊಠಡಿಗಳಿಲ್ಲ. ಸೂಕ್ತ ಗಾಳಿ ಬೆಳಕು ಇಲ್ಲದ ಕಾರಣ ಕೋವಿಡ್ ನಿಯಮ ಪಾಲನೆ ಕಷ್ಟವಾಗಿದೆ. ಹೀಗಾಗಿ ಪರಿಷತ್ತಿನ ಸಚಿವಾಲಯದ ಸಿಬಂದಿಗೆ ಮುಕ್ತವಾಗಿ ಕೆಲಸ ಮಾಡಲು ಅಗತ್ಯ ಮೂಲ ಸೌಲಭ್ಯ ಮತ್ತು ಕೊಠಡಿಗಳನ್ನು ಒದಗಿಸುವಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ತಿನ ಅಸ್ತಿತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಪರಿಷತ್ತು ತನ್ನದೇ ಆದ ಮಹತ್ವ ಹೊಂದಿದೆ. ವಿಧಾನಸಭೆಯಲ್ಲಿ ನಡೆಯದಂಥ ಮಹತ್ವದ ಚರ್ಚೆಗಳು ಪರಿಷತ್ತಿನಲ್ಲಿ ನಡೆಯುತ್ತವೆ ಎಂದರು.