ನಿರ್ಭಯಾ ಪ್ರಕರಣ ನೆನಪಿಸಿದ ಘಟನೆ : ಸಾಮೂಹಿಕ ಅತ್ಯಾಚಾರ: ವೀಡಿಯೋ ವೈರಲ್; ಸೆರೆ
Team Udayavani, May 28, 2021, 6:50 AM IST
ಬೆಂಗಳೂರು: ನಿರ್ಭಯಾ ಪ್ರಕರಣವನ್ನ ನೆನಪಿಸುವ ಘಟನೆಯೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮಹಿಳೆ ಸಹಾಯದಿಂದ ಆರು ಮಂದಿ ಆರೋಪಿಗಳು ಬಾಂಗ್ಲಾದೇಶದ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ತಮ್ಮ ಕೌರ್ಯವನ್ನು ಚಿತ್ರೀಕರಿಸಿಕೊಂಡು ವೈರಲ್ ಮಾಡಿದ್ದಾರೆ.
ಈ ಸಂಬಂಧ ಬಾಂಗ್ಲಾದೇಶದ ಸಾಗರ್, ಮೊಹಮ್ಮದ್ ಬಾಬಾ ಶೇಖ್, ರಿದಾಯ್ ಬಾಬು ಹಾಗೂ ಹೈದರಾಬಾದ್ನ ಹಕೀಲ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಅಂತಾರಾಜ್ಯ ವೇಶ್ಯಾವಾಟಿಕೆ ದಂಧೆಕೋರರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಸಂತ್ರಸ್ತೆ ಹಾಗೂ ಮೊಹಮ್ಮದ್ ಬಾಬಾ ಶೇಖ್ ಸಂಬಂಧಿಕರಾಗಿದ್ದು, ರಿದಾಯ್ ಬಾಬು ಹಾಗೂ ಇತರರ ಜತೆ ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು. ಬಳಿಕ ಯುವತಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದರು. ಅದಕ್ಕೆ ಯುವತಿ ಒಪ್ಪದಿದ್ದಾಗ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಕೃತ್ಯದಲ್ಲಿ ಮಹಿಳೆಯೂ ಭಾಗಿ: ಆರೋಪಿಗಳು ಸಂತ್ರಸ್ತೆ ಮೇಲಿನ ದ್ವೇಷಕ್ಕೆ ಮಹಿಳೆಯೊಬ್ಬರ ಜತೆ ಸೇರಿಕೊಂಡು ಹತ್ತು ದಿನಗಳ ಹಿಂದೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ವೀಡಿಯೋ ಬಾಂಗ್ಲಾದೇಶ ಸೇರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ವೈರಲ್ ಆಗಿತ್ತು. ಅಸ್ಸಾಂ ಪೊಲೀಸರು ವೀಡಿಯೋ ಕುರಿತು ತನಿಖೆ ನಡೆಸಿದಾಗ ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆ ಗಳು ಭಾಗಿಯಾರುವುದು ತಿಳಿಯಿತು. ಬಾಂಗ್ಲಾದೇಶದಲ್ಲೂ ವೀಡಿಯೋ ವೈರಲ್ ಆಗಿದ್ದು, ಸಂತ್ರಸ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಆಕೆಯ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಿದ್ದರು.
ಆಗ ಮೊಹಮ್ಮದ್ ಬಾಬಾ ಶೇಖ್ ಜತೆ ಆಕೆ ಹೋಗಿದ್ದುದು ತಿಳಿಯಿತು. ಬಳಿಕ ಟವರ್ ಲೊಕೇಶನ್ ಆಧರಿಸಿ ಮಾಹಿತಿ ಸಂಗ್ರಹಿಸಿದಾಗ ಭಾರತದಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಬಳಿಕ ಅಸ್ಸಾಂ ಪೊಲೀಸರಿಗೆ ಮಾಹಿತಿ
ನೀಡಿದ್ದು, ಅವರ ತನಿಖೆಯಲ್ಲಿ ಬೆಂಗಳೂರಿನಲ್ಲಿ ಕೃತ್ಯ ಎಸಗಿರುವುದು ತಿಳಿದುಬಂತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಸಂದೀಪ್ ಪಾಟೀಲ್ ನೇತೃತ್ವದ ತಂಡ ಆರೋಪಿಗಳು ರಾಮಮೂರ್ತಿ ನಗರ ಮತ್ತು ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವುದನ್ನು ಪತ್ತೆ ಹಚ್ಚಿದೆ.
ಕಾಂಪೌಂಡ್ ಹಾರಿ ಪರಾರಿಯಾಗಲು ಯತ್ನ: ಪೊಲೀಸರು ಬಂಧಿಸಲು ಹೋದಾಗ ಆರೋಪಿಗಳ ಪೈಕಿ ಒಬ್ಬ ಕಾಂಪೌಂಡ್ ಹಾರಿ ಪರಾರಿಯಾಗಲು ಯತ್ನಿಸಿದ್ದು, ಕಾನ್ಸ್ಟೆಬಲ್ ಶಶಿಕುಮಾರ್ ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಅನಂತರ ಇತರ ಆರೋಪಿಗಳನ್ನು ಮನೆಗೆ ನುಗ್ಗಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತರು ಭೇಟಿ :
ಘಟನೆ ಬೆಳಕಿಗೆ ಬಂದ ಬೆನ್ನಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್, ಡಿಸಿಪಿ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.