ಬಿಜೆಪಿ ವಿದ್ಯಮಾನ: ಕಾಂಗ್ರೆಸ್ ನಿಗಾ
Team Udayavani, Jul 23, 2021, 8:00 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿದ್ಯಮಾನಗಳನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಲವು ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದೆ.
ಇತ್ತೀಚೆಗೆ ಹೈಕಮಾಂಡ್ ಭೇಟಿ ಸಂದರ್ಭ ದಲ್ಲೂ ಇದೇ ವಿಚಾರ ಪ್ರಮುಖವಾಗಿ ಪ್ರಸ್ತಾವ ಗೊಂಡಿದ್ದು, ನಾಯಕತ್ವ ಬದಲಾವಣೆ ಆಗಿದ್ದೇ ಆದರೆ ಮುಂದೆ ಯಾರು ಮುಖ್ಯಮಂತ್ರಿ ಆಗಬಹುದು? ಅದರಿಂದ ಬಿಜೆಪಿಯಲ್ಲಿ ಉಂಟಾಗ ಬಹುದಾದ ಆಂತರಿಕ ಸಂಘರ್ಷದ ಬಗ್ಗೆ ಕಾದು ನೋಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಎಲ್ಲವೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕವಷ್ಟೇ ಶುರುವಾಗಬೇಕಾಗಿದೆ ಎಂದು ನಾಯಕರೋರ್ವರು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಯಾಗಿದ್ದೇ ಆದರೆ ಅದಕ್ಕೆ ಹೊಂದಿಕೊಂಡು ಕಾಂಗ್ರೆಸ್ ಕಾರ್ಯತಂತ್ರವೂ ಬದಲಾಗಲಿದೆ ಎಂದು ಹೇಳಲಾಗಿದೆ.
ಎಂ.ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಳಿಕ ಯಾರೂ ಮಾತನಾಡದಂತೆ ರಾಜ್ಯ ಕಾಂಗ್ರೆಸ್ ನಾಯ ಕರು ತಾಕೀತು ಮಾಡಿದ್ದಾರೆ. ಸೂಕ್ಷ್ಮ ವಿಚಾರ ವಾದ್ದರಿಂದ ಅನಗತ್ಯ ಹೇಳಿಕೆ ಕೊಡುವುದು ಬೇಡ ಎಂದಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಿಗಾ:
ಬಿಜೆಪಿಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಹ ನಿಗಾ ವಹಿಸಿದೆ ಎನ್ನಲಾಗಿದೆ. ದಿಲ್ಲಿ ಬಿಜೆಪಿ ವಲಯದ ಮಾಹಿತಿ ಆಧರಿಸಿ ರಾಜ್ಯ ನಾಯಕರಿಗೆ ಕೆಲವೊಂದು ಸೂಚನೆ, ನಿರ್ದೇಶನ ಸಹ ನೀಡುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುಜೇìವಾಲಾ ಅವರು ಬಹುತೇಕ ಈ ಮಾಸಾಂತ್ಯದವರೆಗೂ ಪಕ್ಷ ಸಂಘಟನೆ ಸಭೆಗಳಲ್ಲಿ ಭಾಗಹಿಸಿ ಇಲ್ಲಿನ ವಿದ್ಯಮಾನ ಗಮನಿಸಲಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಲೆಕ್ಕಾಚಾರ :
ಜೆಡಿಎಸ್ ತೆಗೆದುಕೊಳ್ಳಲಿರುವ ನಿರ್ಧಾರವು ಯಡಿಯೂರಪ್ಪ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಯಡಿಯೂರಪ್ಪ ರಾಜೀನಾಮೆ ಕೊಟ್ಟು “ರೆಬೆಲ್’ ಆದಲ್ಲಿ ಮಾತ್ರ ಜೆಡಿಎಸ್ ಪಕ್ಷದ ರಾಜಕೀಯ ಆಟ ಮುನ್ನೆಲೆಗೆ ಬರಲಿದೆ. ಯಡಿಯೂರಪ್ಪ “ರಾಜೀನಾಮೆ’ ನೀಡಿ ಪಕ್ಷದ ಚಟುವಟಿಕೆಗಳಿಗೆ ಪೂರಕವಾಗಿ ನಿಂತರೆ ಜೆಡಿಎಸ್ ತಟಸ್ಥವಾಗಬೇಕಾಗುತ್ತದೆ.
ಯಡಿಯೂರಪ್ಪ ರಹಿತ ಬಿಜೆಪಿಯನ್ನು ಬೆಂಬಲಿಸಬೇಕಾದ “ಆಹ್ವಾನ’ ಬಿಜೆಪಿಯಿಂದ ಬಂದರೂ, ಅದನ್ನು ಅತಿ ಸೂಕ್ಷ್ಮವಾಗಿ ಪರಿಗಣಿಸಿ ತನ್ನ ನಿರ್ಧಾರ ಪ್ರಕಟಿಸಬೇಕಿದೆ. ಒಂದು ವೇಳೆ ಯಡಿಯೂರಪ್ಪ ಪದತ್ಯಾಗ ಮಾಡಿ, ಬಿಜೆಪಿ ಸರಕಾರವನ್ನು ಉರುಳಿಸಲು ಮುಂದಾದರೆ ಆಗ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದರೆ ವೀರಶೈವ- ಲಿಂಗಾಯತ ಸಮುದಾಯದ ಕೋಪವನ್ನು ಎದುರಿಸಬೇಕಾದೀತು ಎಂದು ಜೆಡಿಎಸ್ ಮುಖಂಡರೊಬ್ಬರು ವಿಶ್ಲೇಷಿಸುತ್ತಾರೆ. ಜತೆಗೆ ಜನರ ಹಿತದೃಷ್ಟಿಯಿಂದ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವ ತರ್ಕವೂ ಪಕ್ಷದಲ್ಲಿದೆ ಎನ್ನಲಾಗುತ್ತಿದೆ.