ಬಿಜೆಪಿಯಲ್ಲಿದೆ ಆಂತರಿಕ ಪ್ರಜಾಪ್ರಭುತ್ವ: ಸಿ.ಟಿ.ರವಿ
Team Udayavani, Sep 11, 2019, 3:05 AM IST
ಮೈಸೂರು: ಕಾಂಗ್ರೆಸ್ ಸೇರಿ ಇತರೆಲ್ಲಾ ಪಕ್ಷಗಳು ಪ್ರಜಾಪ್ರಭುತ್ವದ ಹೆಸರಲ್ಲಿ ಕೌಟುಂಬಿಕ ರಾಜಕಾರಣ ಮಾಡುತ್ತಿವೆ. ಬಿಜೆಪಿಯೊಂದೇ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಕಾಲಕಾಲಕ್ಕೆ ಚುನಾವಣೆ ನಡೆಸುತ್ತಾ ಬಂದಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಮಾತನಾಡಿ, ಜನಸಂಘದಿಂದ ಹಿಡಿದು ಬಿಜೆಪಿವರೆಗೂ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಕಾಲಕಾಲಕ್ಕೆ ಚುನಾವಣೆ ನಡೆಸುತ್ತಾ ಬಂದಿದ್ದೇವೆ.
ಕಾಂಗ್ರೆಸ್ ಪ್ರಜಾಪ್ರಭುತ್ವದ ಹೆಸರಲ್ಲಿ ಕೌಟುಂಬಿಕ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕನ ಆಯ್ಕೆಯಾಗು ವುದು ಪಕ್ಷ ಕಟ್ಟುವ ಯೋಗ್ಯತೆ ಮೇಲಲ್ಲ. ಡಿಎನ್ಎ ಆಧಾರದ ಮೇಲೆ ಎಂದು ಟೀಕಿಸಿದರು.ಜನಸಂಘವನ್ನು ಸ್ಥಾಪಿಸಿದ ಪಂಡಿತ್ ದೀನ್ದಯಾಳ್ ಉಪಾಧ್ಯಾಯರಿಂದ ಹಿಡಿದು ಅಟಲ್ಜೀ, ಆಡ್ವಾಣಿ, ನರೇಂದ್ರ ಮೋದಿ, ಅಮಿತ್ ಶಾ ಅವರ ಕುಟುಂಬದವರ್ಯಾರೂ ಬಿಜೆಪಿಯಲ್ಲಿ ಅವರ ವಾರಸುದಾರರಾಗಲ್ಲ.
ಬೂತ್ ಸಮಿತಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. 1988ರಲ್ಲಿ ಬೂತ್ ಸಮಿತಿ ಅಧ್ಯಕ್ಷನಾಗಿದ್ದ ನನ್ನನ್ನೂ ಪಕ್ಷ ಈ ಮಟ್ಟಕ್ಕೆ ಬೆಳೆಸಿದೆ. ಕಾರ್ಯಕರ್ತರೇ ಬಿಜೆಪಿಯ ಮಾಲೀಕರು. ಇಲ್ಲಿ ಯಾರೂ ಶಾಶ್ವತ ನಾಯಕರಲ್ಲ. ಸಾಯುವವರೆಗೆ ಅಧ್ಯಕ್ಷರಾಗಿರಲೂ ಸಾಧ್ಯವಿಲ್ಲ. ಆರು ವರ್ಷಕ್ಕೊಮ್ಮೆ ಸದಸ್ಯತ್ವ ನವೀಕರಿಸಲೇಬೇಕು ಎಂದರು.