ಕರ್ತವ್ಯದಲ್ಲಿರುವಾಗಲೇ ಬಸ್ ಕಂಡಕ್ಟರ್ ಆತ್ಮಹತ್ಯೆ
Team Udayavani, Feb 11, 2020, 3:02 AM IST
ಲಿಂಗಸುಗೂರು: ಕೊಪ್ಪಳ ಜಿಲ್ಲೆ ಯಲಬುರ್ಗಾದ ಡಿಪೋದ ಬಸ್ ಕಂಡಕ್ಟರ್ ಕರ್ತವ್ಯದಲ್ಲಿರುವಾಗಲೇ ಲಿಂಗಸುಗೂರು ಪಟ್ಟಣದ ರಾಯಚೂರು ಮುಖ್ಯ ರಸ್ತೆಯ ಹಳ್ಳದ ಬಳಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈರಪ್ಪ ಉಪ್ಪಾರ ಮೃತ ಕಂಡಕ್ಟರ್. ಯಲಬುರ್ಗಾ ಡಿಪೋದಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ಅಂಗವಾಗಿ ವಿಶೇಷ ಬಸ್ ಬಿಡಲಾಗಿತ್ತು.
ಈ ಬಸ್ನಲ್ಲಿದ್ದ ಕಂಡಕ್ಟರ್ ಭಾನುವಾರ ರಾತ್ರಿ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿ ನಂತರ ಸೋಮವಾರ ಬೆಳಗ್ಗೆ ತಿಂಥಣಿ ಮೌನೇಶ್ವರಿ ಜಾತ್ರೆಗೆ ತೆರಳಬೇಕಿತ್ತು. ಆದರೆ ಸೋಮವಾರ ಬೆಳಗ್ಗೆ ಕಂಡಕ್ಟರ್ ಈರಪ್ಪ ಉಪ್ಪಾರ ಪಟ್ಟಣದ ರಾಯಚೂರು ಮುಖ್ಯರಸ್ತೆ ಹಳ್ಳದ ಪಕ್ಕದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.