ಬೆಂವಿವಿ ಕುಲಪತಿ ನೇಮಕ ರದ್ದು
Team Udayavani, Sep 25, 2019, 3:02 AM IST
ಬೆಂಗಳೂರು: ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಕೆ ಸೇರಿ ಹಲವು ಅಕ್ರಮ ಹಾಗೂ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ ಕುಲಪತಿ ಕೆ.ಆರ್. ವೇಣುಗೋಪಾಲ್ ನೇಮಕಾತಿಯನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ. ಈ ಕುರಿತು ಪ್ರೊ. ಸಂಗಮೇಶ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಕೆ.ಆರ್.ವೇಣುಗೋಪಾಲ್ ನೇಮಕಕ್ಕೆ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಸರ್ಕಾರದಿಂದ ಅನುಮತಿ ಪಡೆದಿಲ್ಲ. ಹಾಗಾಗಿ ಈ ನೇಮಕ ಊರ್ಜಿತವಾಗುವುದಿಲ್ಲ. ಆದ್ದರಿಂದ ವೇಣುಗೋಪಾಲ್ ಅವರನ್ನು ನೇಮಕ ಮಾಡಿ 2018ರ ಜೂ.12ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಅಲ್ಲದೆ, ವೇಣುಗೋಪಾಲ್ ವಿರುದ್ಧ ಹಲವು ಅಕ್ರಮಗಳ ಆರೋಪಗಳಿವೆ.
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಜೊತೆಗೆ ಅರ್ಹತೆ ಇಲ್ಲದಿದ್ದರೂ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ಪಡೆದಿರುವ ಗಂಭೀರ ಆರೋಪವೂ ಇದೆ. ಅವರು ಯುವಿಸಿಇ ಪ್ರಿನ್ಸಿಪಾಲ್ ಆಗಿದ್ದಾಗಲೂ ಹಲವು ಅಕ್ರಮಗಳನ್ನು ಎಸಗಿದ್ದಾರೆ, ಶೂನ್ಯ ಹಾಜರಾತಿ ಇದ್ದ ಕೆಲವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು. ರೀಡರ್ ಹುದ್ದೆಗೆ ಅವರನ್ನು ನೇಮಕ ಮಾಡಿದ್ದನ್ನೂ ಹೈಕೋರ್ಟ್ ರದ್ದುಪಡಿಸಿತ್ತು ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖೀಸಿದೆ.