ಕೇಂದ್ರ ಸರ್ಕಾರದಿಂದಲೇ ರಾಜ್ಯ ಕೈ ನಾಯಕರ ಫೋನ್ ಕದ್ದಾಲಿಕೆ!
Team Udayavani, Sep 19, 2017, 3:56 PM IST
ಬೆಂಗಳೂರು: ನಮ್ಮ ಸರ್ಕಾರ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡಿಲ್ಲ. ಕೇಂದ್ರ ಸರ್ಕಾರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಿರುಗೇಟು ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ‘ಕೇಂದ್ರ ಸರ್ಕಾರ ರಾಜ್ಯದ ಸಚಿವರು, ಶಾಸಕರು ಸೇರಿ 35 ಮುಖಂಡರ ಫೋನ್ ಕದ್ದಾಲಿಕೆ ಮಾಡಿದೆ. ಐಟಿ, ಇಡಿ,ಸಿಬಿಐ, ಆರ್ಬಿಐ ಎಲ್ಲವನ್ನೂ ದುರ್ಬಳಕೆ ಮಾಡಿ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ’ ಎಂದು ಆರೋಪಿಸಿದರು.
ಆರ್.ಅಶೋಕ್ ಮಾಡಿರುವ ಆರೋಪ ಸುಳ್ಳಾಗಿದೆ. ಸರ್ಕಾರದಿಂದ ಫೋನ್ ಕದ್ದಾಲಿಕೆ ಆರೋಪ ಸುಳ್ಳು ಎಂದರು.
ಸಚಿವರ ಭ್ರಷ್ಟಾಚಾರದ ಚಾರ್ಜ್ಶೀಟ್ ಬಿಡುಗಡೆ ಮಾಡುತ್ತೇನೆ ಎಂದ ಯಡಿಯೂರಪ್ಪ ಹೇಳಿಕೆಯನ್ನು ಲೇವಡಿ ಮಾಡಿದ ರೆಡ್ಡಿ ‘ಯಡಿಯೂರಪ್ಪ ಮೊದಲು ತಮ್ಮ ಮೇಲಿರುವ ಪ್ರಕರಣಗಳ ಕುರಿತು ಜನರಿಗೆ ಉತ್ತರಿಸಲಿ, ಆ ಬಳಿಕ ನಮ್ಮ ಕುರಿತು ಮಾತನಾಡಲಿ’ ಎಂದರು.
‘ಪತ್ರಕರ್ತೆ ಗೌರಿ ಹತ್ಯೆ ಕುರಿತು ಸುಳಿವು ಲಭ್ಯವಾಗಿದ್ದು, ಶೀಘ್ರ ಆರೋಪಿಗಳನ್ನು ವಶಕ್ಕೆ ಪಡೆಯುತ್ತೇವೆ’ ಎಂದು ತಿಳಿಸಿದರು.
ಶೋಭಾ ಸವಾಲು
ಫೋನ್ ಕದ್ದಾಲಿಕೆ ಕುರಿತು ರಾಮಲಿಂಗಾ ರೆಡ್ಡಿ ಆರೋಪಕ್ಕೆ ಭಟ್ಕಳದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ‘ಫೋನ್ ಕದ್ದಾಲಿಕೆ ಮಾಡಿದ ಕುರಿತು ದಾಖಲೆಗಳಿದ್ದರೆ ಕೂಡಲೇ ಬಿಡುಗಡೆ ಮಾಡಲಿ’ ಎಂದು ಸವಾಲೆಸೆದಿದ್ದಾರೆ.