ಬಾಲ್ಯ ಸ್ನೇಹಿತರಿಂದಲೇ ಸಿನಿಮೀಯ ಮಾದರಿ ಹತ್ಯೆ
Team Udayavani, Sep 23, 2017, 7:42 AM IST
ಬೆಂಗಳೂರು: ಸಿನಿಮೀಯ ಮಾದರಿ ಹತ್ಯೆಗೆ ಬೇಡಿಕೆ ಇಟ್ಟ ಹಣ ನೀಡದಿರುವುದೇ ಪ್ರಮುಖ ಕಾರಣವಾಗಿತ್ತು. ಬಾಲ್ಯ ಸ್ನೇಹಿತ ಎನ್ನುವುದನ್ನೂ ಲೆಕ್ಕಿಸದೆ ಬರ್ಬರವಾಗಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದರು ಆ ಐವರು ಕಟುಕರು. ಅವರಲ್ಲೀಗ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ!
ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಕುಮಾರ್ ಪುತ್ರ ಶರತ್ನನ್ನು ಇತ್ತೀಚೆಗೆ ಅಪಹರಿಸಿ ದಾರುಣವಾಗಿ ಕೊಲೆಗೈದು ಕೆರೆಯೊಂದರಲ್ಲಿ ಬಿಸಾಡಿದ್ದ ಬಾಲ್ಯ ಸ್ನೇಹಿತ ಸೇರಿದಂತೆ ನಾಲ್ಕು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೃತ ಶರತ್ನ ಬಾಲ್ಯ ಸ್ನೇಹಿತ ಹಾಗೂ ಪ್ರಕರಣದ ಮಾಸ್ಟರ್ ಮೈಂಡ್ ವಿಶಾಲ್(21), ಈತನ ಸಹಚರರಾದ ಕಾರು ಚಾಲಕ ವಿನಯ್ ಪ್ರಸಾದ್ (24), ಬಿಡದಿಯ ಮದರಸನ್ ಫ್ಯಾಕ್ಟರಿ ನೌಕರರಾದ ಕರುಣ್ ಪೈ (22) ಮತ್ತು ವಿನೋದ್ ಕುಮಾರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಉಬರ್ ಕಾರು ಚಾಲಕ ಶಾಂತ ಕುಮಾರ್ ತಲೆಮರೆಸಿ ಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ನಗರದ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದೇಶಿ ಮತ್ತು ದುಬಾರಿ ಬೈಕ್ಗಳ ಬಗ್ಗೆ ವ್ಯಾಮೋಹ ಹೊಂದಿದ್ದ ಶರತ್ನನ್ನು ಆರೋಪಿ ವಿಶಾಲ್, ಇದೇ ಸೆ.12ರಂದು ಸಂಜೆ 6.30ರ ಸುಮಾರಿಗೆ ಕರೆ ಮಾಡಿ ತನ್ನ ಸ್ನೇಹಿತ ಬಳಿ ಐಷಾರಾಮಿ ಬೆನಾಲಿ ಬೈಕ್ ಇದ್ದು, ಅದನ್ನು ರೈಡ್ ಮಾಡಲು ಹೋಗೋಣ ಎಂದು ಕೆಂಗೇರಿಯ ಸ್ಯಾಟಲೈಟ್ ಟೌನ್ನ ಶಿರ್ಕೆ ಅಪಾರ್ಟ್ಮೆಂಟ್ ಬಳಿ ಕರೆಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ಸ್ನೇಹಿತ ರೆಲ್ಲರೂ
ಕಂಠಪೂರ್ತಿ ಮದ್ಯ ಸೇವಿಸಿ, ಬಳಿಕ ಶರತ್ನನ್ನು ಅಪಹರಿಸಿ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ. ನಂತರ, ಶರತ್ನಿಂದಲೇ ಅಪಹರಣವಾಗಿರುವ ಬಗ್ಗೆ ಸೆಲ್ಫಿ ವಿಡಿಯೋ ಮಾಡಿಸಿ, “50 ಲಕ್ಷ ರೂ. ಕೇಳುತ್ತಿದ್ದಾರೆ. ಕೂಡಲೇ ಹಣ ತಂದು ಕೊಡಿ ಅಪ್ಪಾ’ ಎಂದು ಆತನ ಮೂಲಕವೇ ಬೇಡಿಕೆ ಇಟ್ಟಿದ್ದಾರೆ.
ಗಾಬರಿಗೊಂಡ ಪೋಷಕರು ಕೂಡಲೇ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಇಷ್ಟೆಲ್ಲಾ ಆದ ಬಳಿಕ ಶರತ್ ಮನೆಗೆ ಬಂದ ಆರೋಪಿ ವಿಶಾಲ್, ಕುಟುಂಬಸ್ಥರೊಂದಿಗೆ ಸೇರಿಕೊಂಡು ಶರತ್ ಹುಡುಕಾಟದಲ್ಲಿ ತೊಡಗಿದ್ದಾನೆ. ಕುಟುಂಬ ಸದಸ್ಯರ ಜತೆ ತಾನೂ ಠಾಣೆಗೆ ಹೋಗಿ ದೂರು ನೀಡಿದ್ದಾನೆ.
ಕಲ್ಲು ಕ್ವಾರಿಯಲ್ಲಿ ಮುಚ್ಚಿದ ದುರುಳರು: ಕೆರೆಯ ನೀರಿನಲ್ಲಿ ತೇಲುತ್ತಿದ್ದ ಶರತ್ ಮೃತದೇಹವನ್ನು ಹೊರ ತೆಗೆದ ಆರೋಪಿ
ಗಳು ತಲೆಮರೆಸಿಕೊಂಡಿರುವ ಆರೋಪಿಯ ಶಾಂತಕುಮಾರ್ನ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೇರೆಡೆ ಕೊಂಡೊಯ್ಯಲು
ನಿರ್ಧರಿಸಿದ್ದರು. ಅದರಂತೆ ಸೆ.20ರಂದು ದೇಹವನ್ನು ಗೋಣಿ ಚೀಲವೊಂದರಲ್ಲಿ ಕಟ್ಟಿ ಕಾರಿನ ಹಿಂಬದಿಯಲ್ಲಿ ಹಾಕಿಕೊಂಡಿ
ದ್ದರು. ಬಳಿಕ ಯಾವ ಸ್ಥಳದಲ್ಲಿ ಬಿಸಾಡುವುದು ಎಂದು ತಿಳಿಯದೆ ಅರ್ಧ ದಿನ ಅಲ್ಲಲ್ಲಿ ಸುತ್ತಾಡಿದ್ದಾರೆ. ಬಳಿಕ ರಾಮನಗರ
ಜಿಲ್ಲೆಯ ಅಜ್ಜೆàಯನಹಳ್ಳಿ ಬಳಿಯ ಕುರುಬರಪಾಳ್ಯ ಬಂಡೆಯ ಕ್ವಾರೆಯಲ್ಲಿ ಜೆಸಿಬಿ ಮೂಲಕ ತೆಗೆದಿದ್ದ ಗುಂಡಿಯೊಂದರಲ್ಲಿ
ಹಾಕುತ್ತಾರೆ. ಆದರೆ, ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ವಾಸನೆ ಹೊರಬಾರದಂತೆ ಮೃತ ದೇಹದ ಮೇಲೆ ಸುಮಾರು 15 ಬ್ಯಾಗ್ ಉಪ್ಪು, ಸುಗಂಧ ದ್ರವ್ಯಗಳ ಹತ್ತಾರು ಬಾಟಲಿಗಳನ್ನೇ ಅದರ ಮೇಲೆ ಸುರಿದು ಹೂಳುತ್ತಾರೆ. ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರೆ, ವಿಶಾಲ್ ಮಾತ್ರ ಮತ್ತೆ ಶರತ್ ಮನೆಗೆ ಬಂದು ಪ್ರಕರಣದ ವಿದ್ಯಮಾನಗಳನ್ನು ತಿಳಿದು ಕೊಂಡು, ಅವರಿಗೆ ಸಹಾಯ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಾನೆ ಎಂದು ಅವರು ತಿಳಿಸಿದರು.
ಶರತ್ ಹತ್ಯೆಗೆ ನಡೆದಿತ್ತು ಭಾರಿ ಸ್ಕೆಚ್ ಬೇಡಿಕೆ ಈಡೇರದಿದ್ದರೆ ಶರತ್ನನ್ನು ಕೊಲೆಗೈಯಲು ಟೇಪ್, ಚಾಕು, ಹ್ಯಾಂಡ್
ಗ್ಲೌಸ್ಗಳನ್ನು ಖರೀದಿಸಿದ್ದರು. ದೂರು ದಾಖಲಾಗುತ್ತಿ ದ್ದಂತೆ ವಿಶಾಲ್ ತನ್ನ ಸಹಚರರಿಗೆ ಕರೆ ಮಾಡಿ ಶರತ್ನನ್ನು ಕೊಲ್ಲಲು ಸೂಚಿಸಿದ್ದಾನೆ. ಶರತ್ ಬಾಯಿಗೆ ಟೇಪ್ ಸುತ್ತಿ, ಕೈ, ಕಾಲುಗಳನ್ನು ತಂತಿಯಿಂದ ಕಟ್ಟಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ರಾಮೋಹಳ್ಳಿಯ ನರಸಿಂಹಯ್ಯ ಕೆರೆಯಲ್ಲಿ ಮೃತ ದೇಹಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ ನೀರಿನಲ್ಲಿ ಬಿಸಾಡಿದ್ದಾರೆ. ಮೃತ ದೇಹ ತೇಲುತ್ತದೆಯೇ ಎಂದು ತಿಳಿಯಲು ನಿತ್ಯ ಕೆರೆ ಬಳಿ ಹೋಗುತ್ತಿದ್ದರು. ಕೆಲ ದಿನಗಳ ಬಳಿಕ ಮೃತ ದೇಹ ಮೇಲಕ್ಕೆ ಬಂದಾಗ ವಿಶಾಲ್, ಸ್ನೇಹಿತ ವಿನೋದ್ ಕುಮಾರ್ನನ್ನು ಕರೆದೊಯ್ದು ಮೃತ ದೇಹಕ್ಕೆ ಮತ್ತೆ ಕಲ್ಲು ಕಟ್ಟಿ ಮತ್ತೆ ಕೆರೆಯೊಳಗೆ ಬಿಸಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.