ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ
Team Udayavani, Jan 21, 2022, 7:00 AM IST
ಬೆಂಗಳೂರು: ರಾಜ್ಯದಲ್ಲಿ ವಿಧಿಸಲಾಗಿರುವ ವಾರಾಂತ್ಯ ಕರ್ಫ್ಯೂ ತೆರವುಗೊಳಿಸಬೇಕು ಎಂಬ ಒತ್ತಡ ಹೆಚ್ಚಾಗಿರುವ ನಡುವೆಯೇ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ.
ಸಭೆಯ ಬಳಿಕ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದ್ದು, ವಾರಾಂತ್ಯ ಕರ್ಫ್ಯೂ ಅಂತ್ಯವಾಗುತ್ತದೋ ಅಥವಾ ಕೆಲವೆಡೆ ಮಾತ್ರ ಇರುತ್ತದೋ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ವಾರಾಂತ್ಯ ಕರ್ಫ್ಯೂ ತೆರವುಗೊಳಿಸಬೇಕು ಎಂದು ಆಡಳಿತಾರೂಢ ಬಿಜೆಪಿಯಲ್ಲೇ ಒತ್ತಡ ಇದೆ. ಜತೆಗೆ ಹೊಟೇಲ್, ಕೈಗಾರಿಕೆ ಸೇರಿ ಹಲವು ಉದ್ಯಮಗಳೂ ಇದೇ ಆಗ್ರಹ ಮುಂದಿಟ್ಟಿವೆ.
ರಾಜ್ಯದಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಒಂದೆಡೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. ಆದರೆ, ಇದರಿಂದ ಉದ್ಯಮ ಹಾಗೂ ಸೇವಾ ವಲಯಕ್ಕೆ ಭಾರೀ ಸಂಕಷ್ಟ ಎದುರಾಗಿದೆ. ಹೀಗಾಗಿ, ವಾರಾಂತ್ಯ ಕರ್ಫ್ಯೂ ಹಿಂಪಡೆದು ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ನಿಗದಿ ಮಾಡುವುದು ಸೂಕ್ತ ಎಂಬ ವಾದವೂ ಇದೆ.
ಬೆಂಗಳೂರಿನಲ್ಲಿ ಮುಂದುವರಿಕೆ?:
ರಾಜ್ಯದಲ್ಲಿ ಗುರುವಾರವೂ 47,754 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ ಒಂದೇ ದಿನ 30,540 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ ಪಾಸಿಟಿವಿಟಿ ದರ ಶೇ. 18.48ಕ್ಕೆ ಏರಿದೆ. ಆದರೆ, ಪ್ರಕರಣ ಹೆಚ್ಚಿರುವಂಥ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಸಲು ತಜ್ಞರು ಸಲಹೆ ನೀಡಿದ್ದಾರೆ.
ಈ ಮೊದಲು ಜ.25ರ ಬಳಿಕ ರಾಜ್ಯದಲ್ಲಿ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅಂದಾಜಿಸ ಲಾಗಿತ್ತು. ಆದರೆ, ಕಳೆದ 2-3 ದಿನಗಳ ಅಂಕಿ-ಸಂಖ್ಯೆ ನೋಡಿದರೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದವರೆಗೂ ಹೆಚ್ಚು ಪ್ರಕರಣಗಳು ದಾಖಲಾಗುವ ಅಂದಾಜಿದೆ.
ಇತ್ತೀಚೆಗೆ ಮುಖ್ಯಮಂತ್ರಿಯವರು ರಾಜ್ಯದ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜತೆ ನಡೆಸಿದ ವೀಡಿಯೋ ಸಂವಾದದಲ್ಲಿ ಹಲವಾರು ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾವಾರು ಪರಿಸ್ಥಿತಿಯ ಅಂಕಿ-ಅಂಶ ಪಡೆಯಲಾಗಿದೆ. ಜತೆಗೆ, ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿಯನ್ನೂ ಪಡೆದಿದ್ದಾರೆ. ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಿ ತಜ್ಞರ ಸಲಹೆ ಮೇರೆಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಸಾಧ್ಯತೆಗಳೇನು? :
- ವಾರಾಂತ್ಯ ಕರ್ಫ್ಯೂ ವಾಪಸ್,
- ರಾತ್ರಿ ಕರ್ಫ್ಯೂ 11ರಿಂದ ಬೆಳಗ್ಗೆ 5
- ಬೆಂಗಳೂರು ಸೇರಿ ಪ್ರಕರಣ ಹೆಚ್ಚಾಗಿರುವ ಕಡೆ ವಾರಾಂತ್ಯ ಕರ್ಫ್ಯೂ ಒಂದು ಅಥವಾ ಎರಡು ವಾರ ಮುಂದುವರಿಕೆ
- ಕಡಿಮೆ ಪ್ರಕರಣ ಇರುವ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ವಾಪಸ್, ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ
- ಮಾರುಕಟ್ಟೆ, ಮಾಲ್, ಸಿನೆಮಾ ಮಂದಿರ, ಪಾರ್ಕ್ ಪ್ರವೇಶ ನಿರ್ಬಂಧ ಮುಂದುವರಿಕೆ
ಶುಕ್ರವಾರದ ಸಭೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿ ಅವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಎಲ್ಲರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜನ ಸಾಮಾನ್ಯರ ಭಾವನೆಗಳನ್ನು ವಿರೋಧಿ ಸುವುದೂ ಇಷ್ಟವಿಲ್ಲ. ಜನರಿಗೆ ತೊಂದರೆ ಕೊಡುವುದರಿಂದ ಸರಕಾರಕ್ಕೆ ಲಾಭವೂ ಇಲ್ಲ.–ಡಾ| ಕೆ.ಸುಧಾಕರ್, ಆರೋಗ್ಯ ಸಚಿವ