ವೇಣುಗೋಪಾಲ್ಗೆ ಸಿಎಂ ಉಪಹಾರ ಕೂಟ: ನಾಯಕರಿಗಿಲ್ಲ ಎಂಟ್ರಿ,ವಾಗ್ವಾದ!
Team Udayavani, May 10, 2017, 11:27 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಬೆಳಗ್ಗೆ ಉಪಹಾರಕೂಟ ಆಯೋಜಸಿದ್ದರು. ಈ ವೇಳೆ ಕೆಲವೇ ಕೆಲವು ಮುಖಂಡರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿತ್ತು.
ರಾಜ್ಯ ಪದಾಧಿಕಾರಿಗಳು ಮತ್ತು ಮುಖಂಡರುಗಳು, ಶಾಸಕರುಗಳಿಂದ ಅಭಿಪ್ರಾಯ ಸಂಗ್ರಹಿಸಿದ ವೇಣುಗೋಪಾಲ್ ಅವರು ಮುಖ್ಯಮಂತ್ರಿಗಳ ಬಳಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಹ ಉಸ್ತುವಾರಿ ವಿಷ್ಣುನಾಥನ್ ಉಪಹಾರಕೂಟಕ್ಕೆ ತೆರಳಿದ್ದ ವೇಳೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಕುಸಿದು ಬಿದ್ದ ಘಟನೆ ನಡೆದಿದೆ. ಅವರಿಗೆ ಕುಮಾರಕೃಪಾ ಅತಿಥಿಗೃಹದಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೊರಗೆ ವಾಗ್ವಾದ !
ವೇಣುಗೋಪಾಲ್ ಅವರು ಸಿಎಂ ಮನೆಯಲ್ಲಿದ್ದ ವೇಳೆ ಪೊಲೀಸರು ಯಾವೊಬ್ಬ ಮುಖಂಡರೂ ಒಳಗೆ ಪ್ರವೇಶಿಸದಂತೆ ತಡೆ ಹಿಡಿದಿದ್ದರು. ಈ ವೇಳೆ ಸಿಎಂ ಭೇಟಿಗೆಂದು ಅಗಮಿಸಿದ್ದ ಶಿವಮೊಗ್ಗ ಶಾಸಕ ಪ್ರಸನ್ನ ಕುಮಾರ್ ಬೆಂಬಲಿಗರೆನ್ನಲಾದ ಮುಖಂಡರು ತೀವ್ರ ವಾಗ್ವಾದ ನಡೆಸಿದರು.