ಮಂಜೇಗೌಡ ಜೊತೆ ಮಾತನಾಡಿದ್ದು ನಾನೇ…,ಏನಿವಾಗ ?
Team Udayavani, Mar 22, 2018, 11:20 AM IST
ಮೈಸೂರು: ‘ನಾನೊಬ್ಬ ಕಾಂಗ್ರೆಸ್ ಪಕ್ಷದ ಮುಖಂಡ, ನನ್ನ ಪಕ್ಷವನ್ನು ಗೆಲ್ಲಿಸಿ ಅಂತ ತಾನೆ ನಾನು ಹೇಳಬೇಕು. ಜೆಡಿಎಸ್ ಗೆಲ್ಲಿಸಿ ಅಂತ ಹೇಳಕಾಗುತ್ತಾ’ ಎಂದು ಸಿಎಂ ಸಿದ್ದರಾಮಯ್ಯ ವೈರಲ್ ಆದ ಆಡಿಯೋ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ಅವರೊಂದಿಗಿನ ಸಂಭಾಷಣೆಯ ಆಡಿಯೋ ಕುರಿತು ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ ‘ಹೌದು ಮಂಜೇಗೌಡ ಜೊತೆ ಮಾತನಾಡಿದ್ದು ನಾನೇ, ಏನಿವಾಗ’ ಎಂದು ಪ್ರಶ್ನಿಸಿದರು.
‘ನಾನು ಎಲ್ಲವನ್ನೂ,ಎಲ್ಲರ ಜೊತೆ ಬಹಿರಂಗವಾಗಿಯೇ ಹೇಳುವುದು. ಅದರಲ್ಲಿ ತಪ್ಪೇನಿದೆ. ಕದ್ದು ಮುಚ್ಚಿ ಮಾತನಾಡುವ ವಿಚಾರ ಇಲ್ಲ. ನನ್ನ ಫೋನ್ ಕದ್ದಾಲಿಸಿದರೂ ತೊಂದರೆ ಇಲ್ಲ.ಕುಮಾರಸ್ವಾಮಿ ಏನು ಚಾಮುಂಡೇಶ್ವರಿ ಉಪ ಚುನಾವಣೆ ವೇಳೆ ಮೈಸೂರಿಗೆ ಬಂದು ನನಗೆ ಮುತ್ತಿಟ್ಟು ಹೋಗಿದ್ರಾ’ ಎಂದರು.
ಮಂಜೇಗೌಡ ಅವರಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರಿ ಕೆಲಸಕ್ಕೆ ತಕ್ಷಣ ರಾಜೀನಾಮೆ ನೀಡಿ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ.ರೇವಣ್ಣ ಎದುರು ಚುನಾವಣೆಗೆ ನಿಲ್ಲುವಂತೆ ಸೂಚಿಸಿದ್ದರು. ಗೌಡ್ರ ಮಕ್ಕಳು ಗೆದ್ದಿದ್ದು ಸಾಕು, ಈ ಬಾರಿ ಮಂಜೇಗೌಡರನ್ನು ಗೆಲ್ಲಿಸಬೇಕು. ಎಲ್ಲರೂ ಅವರ ಪರ ಕೆಲಸ ಮಾಡಬೇಕು. ತಕ್ಷಣ ನೀನು ರಾಜೀನಾಮೆ ನೀಡಿ ಕ್ಷೇತ್ರಕ್ಕೆ ತೆರಳಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಆ ಆಡಿಯೋ ವೈರಲ್ ಆಗಿತ್ತು.