ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ಕೊಡಲ್ಲ : ಸಿಎಂ ವಾರ್ನಿಂಗ್
Team Udayavani, Apr 12, 2021, 4:55 PM IST
ಬೀದರ್ : ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವೇತನವನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ, ಇನ್ನಷ್ಟು ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸೋಮವಾರ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಗೌರವಯುತವಾಗಿ ಬಂದು ಬಸ್ಗಳನ್ನು ಓಡಿಸಬೇಕು. ಹಬ್ಬಗಳ ಸಮಯದಲ್ಲಿ ಸಾರಿಗೆ ಸಿಬ್ಬಂದಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಪ್ರತಿಭಟನೆ ಮಾಡುವವವರ ವಿರುದ್ಧ ಕ್ರಮ ಅನಿವಾರ್ಯವಾಗುತ್ತದೆ. ಈಗಾಗಲೇ ಯಾರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಷ್ಟ ಸಮಯದಲ್ಲೂ 2300 ಕೋಟಿ ರೂ. ಸಂಬಳವನ್ನು ಸರ್ಕಾರದಿಂದ ಕೊಡಲಾಗಿದ್ದು, ಅಗತ್ಯ ಸಹಕಾರವನ್ನು ಸಹ ನೀಡಲಾಗಿದೆ. ಯಾವನದ್ದೋ ಮಾತು ಕೇಳಿಕೊಂಡು ಮುಷ್ಕರ ಮಾಡುತ್ತಿರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.