ಲಾರಿಗಳ ಡಿಕ್ಕಿ; ಮೂವರ ಸಾವು
Team Udayavani, Feb 17, 2020, 3:00 AM IST
ಕೊಲ್ಹಾರ (ವಿಜಯಪುರ): ಲಾರಿಗಳ ಮಧ್ಯೆ ಮುಖಾಮುಖೀ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರ ಹಳ್ಳದಗೆಣ್ಣೂರ ಕ್ರಾಸ್ ಬಳಿ ಭಾನುವಾರ ನಸುಕಿನ ಜಾವ 5 ಗಂಟೆಗೆ ನಡೆದಿದೆ.
ಮಿನಿ ಲಾರಿಯಲ್ಲಿದ್ದ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ದಾವಲಸಾಬ ಹಾಜಿಸಾಬ ಅತ್ತಾರ (32), ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಕಾಸು ಚಂದ್ರಾಮ ಅಹಿರವಾಡಗಿ (36) ಹಾಗೂ ಇನ್ನೊಂದು ಲಾರಿಯಲ್ಲಿದ್ದ ಮಧ್ಯಪ್ರದೇಶದ ಜಗದೀಶ ರಾಮಚಂದ್ರ ಬಾಮನ್ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಮಿನಿ ಲಾರಿ ಹಾಗೂ ಹುಬ್ಬಳ್ಳಿ ಕಡೆಯಿಂದ ಬಂದ ಲಾರಿ ಮುಖಾಮುಖೀ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ನಜ್ಜುಗುಜ್ಜಾದ ಲಾರಿಗಳಲ್ಲಿ ಶವಗಳು ಸಿಲುಕಿದ್ದರಿಂದ ಜೆಸಿಬಿ, ಕ್ರೇನ್ ಮೂಲಕ ಹೊರ ತೆಗೆಯಲಾ ಯಿತು. ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.