ಕೋವಿಡ್ ಎರಡು ಅಲೆಯಲ್ಲಿ ಪಾಠ ಕಲಿತಿದ್ದೇವೆ: ಡಾ. ಕೆ. ಸುಧಾಕರ್
Team Udayavani, Jan 8, 2022, 9:30 PM IST
ಬೆಂಗಳೂರು: ಕೊರೊನಾದಿಂದ ಪಾಠ ಕಲಿತ ಬಳಿಕವೂ ಕ್ರಮ ತೆಗೆದುಕೊಳ್ಳದೆ ಇರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಯಾವುದೇ ರಾಜ್ಯದಲ್ಲಿ ಸಹ ವಿರೋಧ ಪಕ್ಷಗಳು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದಿಲ್ಲ. ಎಲ್ಲ ಪಕ್ಷಗಳು ಆಯಾ ಸರ್ಕಾರದ ಜತೆಗೆ ಕೈ ಜೋಡಿಸಿ, ಕೆಲಸವನ್ನು ಹಂಚಿಕೊಳ್ಳುವಲ್ಲಿ ಕೈಜೋಡಿಸಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ ತಿಳುವಳಿಕೆ ಇಲ್ಲದೆ ಪಾದಯಾತ್ರೆ ಮಾಡಲು ಹೊರಟಿದೆ ಎಂದು ಹೇಳಿದರು.
ಇದನ್ನೂ ಓದಿ:ಪಂಚರಾಜ್ಯ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧವಾಗಿದೆ : ಅರವಿಂದ್ ಕೇಜ್ರಿವಾಲ್
ಒಮಿಕ್ರಾನ್ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಇದು ಸಂಪೂರ್ಣ ಲಾಕ್ಡೌನ್ ಅಲ್ಲ. ಎರಡು ದಿನಗಳ ಕಾಲ ಎಲ್ಲರೂ ಮನೆಯಲ್ಲಿ ಇರಬೇಕು. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಬೇಕು. ಬೆಂಗಳೂರಿನಲ್ಲಿ ಶೇ.7.5 ಪಾಸಿಟಿವಿಟಿ ಇದೆ. ಮೊದಲು ಬೆಂಗಳೂರಿಗೆ ಬಂದಾ ಕೆಲವೇ ದಿನಗಳಲ್ಲಿ ಇತರೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೋವಿಡ್ ನಿಯಂತ್ರಣ ಮಾಡಲಾಗುತ್ತದೆ ಎಂದರು.