ಕೋವಿಡ್ ಹೆಚ್ಚಳ: “ವೈದ್ಯರ ನಡೆ ಹಳ್ಳಿ ಕಡೆ’ ಪುನರಾರಂಭಿಸಲು ಸೂಚನೆ
ಮತ್ತೆ ಹಳ್ಳಿಗಳತ್ತ ವೈದ್ಯರು
Team Udayavani, Jan 19, 2022, 6:05 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಸರಪಳಿಯನ್ನು ತುಂಡರಿಸಲು ಸರಕಾರ ನಿರ್ಧರಿ ಸಿದ್ದು, “ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದಾಗಿ ಘೋಷಿಸಿದೆ.
ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜತೆ ಮಂಗಳವಾರ ವೀಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಯಾ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಕೂಡಲೇ “ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಪ್ರಾರಂಭಿಸಬೇಕು. ವೈದ್ಯರು ಮತ್ತು ಎಎನ್ಎಂಗಳು ಮನೆ ಮನೆಗೆ ಭೇಟಿ ನೀಡಬೇಕು. ಪ್ರತೀ ಗ್ರಾಮಕ್ಕೆ ತೆರಳಿ, ಜನರನ್ನು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ವಿಶೇಷ ಮಾರ್ಗಸೂಚಿಯನ್ನು ರೂಪಿಸುತ್ತೇವೆ ಎಂದಿದ್ದಾರೆ.
ಡಿ.ಸಿ.ಗಳೇ ಹೊಣೆ
ಲಸಿಕೆ ನೀಡುವುದು ಕಡಿಮೆಯಾದರೆ, ನಿರ್ಲಕ್ಷ್ಯ ಕಂಡುಬಂದರೆ ಡಿ.ಸಿ.ಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಮಂಗಳವಾರದ ಸಭೆಯಲ್ಲಿ ಸಿಎಂ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ಏರಿಕೆ, ದೇಶದಲ್ಲಿ ಇಳಿಕೆ
ರಾಜ್ಯದಲ್ಲಿ ಮಂಗಳವಾರ 41,457 ಪ್ರಕರಣ ದಾಖಲಾಗುವ ಮೂಲಕ ಪಾಸಿಟಿವಿಟಿ ದರ ಶೇ. 22.30ಕ್ಕೆ ಏರಿದೆ. ರಾಜ್ಯದಲ್ಲಿ ಕೊರೊನಾ ಸ್ಫೋಟವಾದರೂ ದೇಶ ಮಟ್ಟದಲ್ಲಿ ಸೋಂಕು ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ.
ಸೋಮವಾರದಿಂದ ಮಂಗಳವಾರಕ್ಕೆ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 2,38,018 ಮಂದಿಗೆ ಕೊರೊನಾ ದೃಢಪಟ್ಟಿದ್ದು, 310 ಮಂದಿ ಸಾವಿಗೀಡಾಗಿದ್ದಾರೆ.
ಸಿಎಂ ಪ್ರಮುಖ ಸೂಚನೆಗಳು
-ಮೊದಲ, 2ನೇ ಡೋಸ್ ಲಸಿಕೆ ಪ್ರಮಾಣದಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳು ತಿಂಗಳ ಅಂತ್ಯ ದೊಳಗೆ ರಾಜ್ಯ ಸರಾಸರಿ ತಲುಪಬೇಕು.
-ಪ್ರತೀ ಗ್ರಾಮದ ಕಟ್ಟಕಡೆಯ ಮನೆಗೂ ಔಷಧ ಕಿಟ್ ತಲುಪಿಸಬೇಕು. ಹೋಂ ಐಸೋಲೇಶನ್ನಲ್ಲಿ ಇರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು.
-ಶೇ. 94ರಷ್ಟು ಸೋಂಕುಪೀಡಿತರು ಮನೆಯಲ್ಲೇ ಐಸೋಲೇಟ್ ಆಗಿರು ವುದರಿಂದ ಮನೆಯವರಿಗೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು.
-ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ಮತ್ತು ಚಿಕಿತ್ಸೆ ಕುರಿತು ವಿಶೇಷ ಎಸ್ಒಪಿ ಜಾರಿ ಮಾಡಬೇಕು
-ಎಲ್ಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರು ವುದರಿಂದ “ಅನ್ಯ ಕಾಯಿಲೆ ಇರುವವರನ್ನು’ ಗುರುತಿಸಿ, ಹೋಮ್ ಐಸೋಲೇಶನ್ನಲ್ಲಿರುವವರಿಗೆ ಟೆಸ್ಟ್ ಮಾಡಿ, ಚಿಕಿತ್ಸೆ ನೀಡಬೇಕು.
ಕರ್ಫ್ಯೂ; ಶುಕ್ರವಾರ ನಿರ್ಧಾರ
ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಮುಂದುವರಿಕೆಗೆ ವಿರೋಧ ವ್ಯಕ್ತ ವಾಗು ತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಡಿಲಿಕೆ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದು, ಶುಕ್ರವಾರ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ. ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ. ಬೆಂಗಳೂರು ಮತ್ತಿತರ ಕೆಲವೆಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರೂ ಮರಣ ಪ್ರಮಾಣ ಮತ್ತು ಜನರ ಆರೋಗ್ಯದ ಮೇಲಿನ ಪರಿಣಾಮ ನೋಡಿಕೊಂಡು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
“ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯ ಕ್ರಮ ವನ್ನು ಮತ್ತೆ ಪ್ರಾರಂಭ ಮಾಡಲಾಗುತ್ತದೆ. ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ಕೋವಿಡ್ ವಾರ್ ರೂಮ್ ತೆರೆದು ಟೆಲಿ ಟ್ರಯಾಜಿಂಗ್ ಮಾಡಲಾಗುತ್ತದೆ. ಜತೆಗೆ ಎಲ್ಲ ಕಡೆ ಫೀವರ್ ಕ್ಲಿನಿಕ್ ಪ್ರಾರಂಭಿಸುವ ಮೂಲಕ ಲಕ್ಷಣವಿಲ್ಲದ ಸೋಂಕುಪೀಡಿತರು ಅನಗತ್ಯವಾಗಿ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಲಾಗುವುದು.
– ಡಾ| ಸುಧಾಕರ್, ಆರೋಗ್ಯ ಸಚಿವ
ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ. ಕರ್ಫ್ಯೂನಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದೆ. ಸಾಮಾನ್ಯ- ಮಧ್ಯಮ ವರ್ಗದ ಜನರು ತುಂಬಾ ಸಂಕಷ್ಟದಲ್ಲಿದ್ದು, ಅದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವಂತಾಗಬೇಕು.
– ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ