ಅತಿವೃಷ್ಟಿ: ಇಬ್ಬರ ಆತ್ಮಹತ್ಯೆ
Team Udayavani, Sep 16, 2019, 3:00 AM IST
ಹಾನಗಲ್ಲ/ರಾಮದುರ್ಗ: ಅತಿವೃಷ್ಟಿಯಿಂದಾಗಿ ಮನನೊಂದು ರಾಜ್ಯದ ಹಲವೆಡೆ ಇಬ್ಬರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಬೆಳೆ ನಾಶವಾಗಿದ್ದರಿಂದ ಗ್ರಾಮದ ಶಾಲೆಯ ಸೂರಿಗೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಚಂದ್ರು ಬಸಪ್ಪ ನೀಲಪ್ಪನವರ (35) ಮೃತ ರೈತ.
4 ಎಕರೆ ಜಮೀನಿನಲ್ಲಿ ಗೋವಿನ ಜೋಳ, ಹಸಿಮೆಣಸಿನ ಗಿಡಗಳನ್ನು ಬೆಳೆದಿದ್ದರು. ಸ್ಥಳೀಯ ಬ್ಯಾಂಕ್ ಮತ್ತು ಕೈ ಸಾಲವಾಗಿ 3ಲಕ್ಷ ರೂ.ಸಾಲ ಮಾಡಿದ್ದರು.ಈ ಕುರಿತು ಮೃತನ ತಾಯಿ ನೀಲಮ್ಮ ದೂರು ದಾಖಲಿಸಿದ್ದಾರೆ. ಮತ್ತೂಂದೆಡೆ ಪ್ರವಾಹದಿಂದ ಮಗ್ಗ ಹಾನಿಯಾಗಿದ್ದರಿಂದ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನೇಕಾರನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಮೇಶ ನೀಲಕಂಠಪ್ಪ ಹವಳಕೋಡ (42) ಆತ್ಮಹತ್ಯೆ ಮಾಡಿಕೊಂಡ ನೇಕಾರ. ಮಲಪ್ರಭಾ ನದಿ ಪ್ರವಾಹದಿಂದ ಮನೆಗೆ ನೀರು ನುಗ್ಗಿ ನೇಕಾರಿಕೆ ಯಂತ್ರಗಳು ಹಾಳಾಗಿದ್ದರಿಂದ ದಿಕ್ಕು ತೋಚದಂತಾಗಿ ಮನನೊಂದು ಶನಿವಾರ ರಾತ್ರಿ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.