ಡಿಜಿಪಿ ನೇಮಕ ವಿವಾದ: ತ್ವರಿತ ವಿಚಾರಣೆಗೆ ನಿರ್ದೇಶನ
Team Udayavani, Jun 25, 2019, 3:00 AM IST
ಬೆಂಗಳೂರು: ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ನೀಲಮಣಿ ಎನ್. ರಾಜು ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ದೂರು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದ ವ್ಯಾಜ್ಯವನ್ನು ತ್ವರಿತ ವಿಚಾರಣೆ ನಡೆಸಿ ಪ್ರಕರಣ ವಿಲೇವಾರಿ ಮಾಡುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ) ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಈ ಕುರಿತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿಯಾಗಿರುವ ಎಂ.ಎನ್. ರೆಡ್ಡಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸಿಎಟಿಗೆ ಈ ನಿರ್ದೇಶನ ನೀಡಿ ಅರ್ಜಿ ವಿಲೇವಾರಿ ಮಾಡಿತು.
ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು ನೇಮಕ ಮಾಡುವಾಗ ಆರು ತಿಂಗಳ ಸೇವಾವಧಿ ಬಾಕಿ ಇರುವ ಅಧಿಕಾರಿಗಳನ್ನು ಪರಿಗಣಿಸಬೇಕೆಂದು 2019ರ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಆದರೆ, ನೀಲಮಣಿ ರಾಜು ಅವರನ್ನು ನೇಮಕ ಮಾಡುವಾಗ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನ ಈ ತೀರ್ಪನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಿ ರೆಡ್ಡಿಯವರು ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಸಿಎಟಿ ಅವರ ಮಧ್ಯಂತರ ಮನವಿ ತಿರಸ್ಕರಿಸಿತ್ತು. ಆಗ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಪ್ರಕರಣವನ್ನು ಪುನಃ ಸಿಎಟಿಗೆ ವರ್ಗಾಯಿಸಿದೆ.