ಧಾರವಾಡ ಕಾರಾಗೃಹದ ರೌಡಿಯಿಂದ ಉದ್ಯಮಿಗೆ ಬೆದರಿಕೆ; ಫೋನ್ ಸಿಸಿಬಿ ಪೊಲೀಸರ ವಶಕ್ಕೆ
Team Udayavani, Jul 8, 2022, 9:39 PM IST
ಧಾರವಾಡ : ಇಲ್ಲಿನ ಕೇಂದ್ರ ಕಾರಾಗೃಹ ದಲ್ಲಿರುವ ಬೆಂಗಳೂರು ಮೂಲದ ರೌಡಿಯೊಬ್ಬ ರಾಜಧಾನಿಯ ಉದ್ಯಮಿಗೆ ಬೆದರಿಕೆಯೊಡ್ಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ರೌಡಿ ಬಳಕೆ ಮಾಡುತ್ತಿದ್ದ ಫೋನನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಶಿವಾಜಿ ನಗರದ ನಿವಾಸಿ ರೌಡಿ ಬಾಂಬೆ ಸಲೀಂ ಎಂಬಾತ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳೆದ ೨೦೨೧ರಲ್ಲಿ ಬೆದರಿಕೆ, ಹನಿಟ್ರ್ಯಾಪ್ ಸೇರಿದಂತೆ ವಿವಿಧ ಪ್ರಕರಣಗಳಡಿ ಬಂಧಿತನಾಗಿ ಬಂದಿದ್ದ. ಧಾರವಾಡ ಜೈಲಿನಲ್ಲಿಯೂ ಕುಳಿತು ಇದೇ ಕೃತ್ಯ ಮುಂದುವರೆಸಿದ್ದ ಎನ್ನಲಾಗಿದೆ.
ಬೆಂಗಳೂರು ಮೂಲದ ಉದ್ಯಮಿಗೆ ಬೆದರಿಕೆ ಹಾಕಿದ್ದು, ಆ ಉದ್ಯಮಿ ಕಾರಾಗೃಹದ ಡಿಜಿಪಿ ಅಲೋಕ ಮೋಹನ್ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಅಲೋಕ್ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪರೆಡ್ಡಿ ಅವರಿಗೆ ವರ್ಗಾಯಿಸಿದ್ದರು. ತನಿಖೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಕಳೆದ ಜು. ೧ರಂದು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಬಾಂಬೆ ಸಲೀಂನಿಂದ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಘಟನೆಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಕಲಾಸಿಪಾಳ್ಯ ಠಾಣೆ ಇನ್ಸಪೆಕ್ಟರ್ ಮತ್ತು ಸಬ್ ಇನ್ಸಪೆಕ್ಟರ್ ಅವರನ್ನು ಅಮಾನತ್ತು ಮಾಡಲಾಗಿದೆ.