ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್ಗೆ? : ರಾಮಲಿಂಗಾ ರೆಡ್ಡಿ ಕಾರ್ಯತಂತ್ರ
Team Udayavani, Jan 26, 2021, 7:20 AM IST
ಬೆಂಗಳೂರು: ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಸಂಬಂಧಿಸಿ ಅಸಮಾಧಾನಗೊಂಡಿರುವ ವಲಸಿಗ ಶಾಸಕರನ್ನು ಮತ್ತೆ ಮಾತೃಪಕ್ಷಕ್ಕೆ ಕರೆತರುವ ಪ್ರಯತ್ನವೊಂದು ಕಾಂಗ್ರೆಸ್ನಲ್ಲಿ ನಡೆಯುತ್ತಿದೆ.
ಸ್ವತಃ ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರೇ ಇಂಥದ್ದೊಂದು ಸಾಧ್ಯತೆಯನ್ನು ಬಹಿರಂಗ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಬೆಂಗಳೂರಿನ ಕಾಂಗ್ರೆಸ್ ಶಾಸಕರು ಸೇರಿ ಕೆಲವರು ಕಾರಣಾಂತರಗಳಿಂದ ಪಕ್ಷ ತೊರೆದಿದ್ದು, ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಮುಂದಾಗಿದ್ದ ಶಾಸಕರ ಪಟ್ಟಿಯಲ್ಲಿ ರಾಮಲಿಂಗಾ ರೆಡ್ಡಿ ಕೂಡ ಸೇರಿದ್ದು, ಪಕ್ಷಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಹೈಕಮಾಂಡ್ ಮನವೊಲಿಕೆ ಬಳಿಕ ರಾಜೀನಾಮೆಯನ್ನು ವಾಪಸ್ ಪಡೆದಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಎಂಟಿಬಿ ನಾಗರಾಜ್, ಆರ್. ರೋಷನ್ ಬೇಗ್ ಹಾಗೂ ಜೆಡಿಎಸ್ನ ಗೋಪಾಲಯ್ಯ ಅವರು ರಾಮಲಿಂಗಾ ರೆಡ್ಡಿಯವರನ್ನೇ ನಂಬಿ ಬಿಜೆಪಿ ಸೇರಲು ನಿರ್ಧರಿಸಿದ್ದರು. ಬದಲಾದ ಬೆಳವಣಿಗೆಯಲ್ಲಿ ರೆಡ್ಡಿ ಪಕ್ಷದಲ್ಲೇ ಉಳಿದು, ಇವರನ್ನು ನಂಬಿದ್ದ ಶಾಸಕರು ಪಕ್ಷ ಬಿಟ್ಟಿದ್ದರು. ಹೀಗೆ ಬಿಜೆಪಿ ಸೇರಿದ್ದ ಬಹುತೇಕರು ಈಗ ತಮಗೆ ನೀಡಿರುವ ಖಾತೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.