ಗ್ರಾಮ, ಜನವಸತಿಗಳ ಡ್ರೋನ್ ಸರ್ವೇ ಚುರುಕು: ಸಚಿವ ಆರ್. ಅಶೋಕ್
Team Udayavani, Feb 23, 2023, 6:50 AM IST
ಬೆಂಗಳೂರು: ರಾಜ್ಯದ ಎಲ್ಲ ಗ್ರಾಮಗಳು ಮತ್ತು ಜನವಸತಿಗಳ ಡ್ರೋನ್ ಸವೇ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲಾಗುವುದು ಎಂದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆ 2016ರಲ್ಲಿ ಜಂಟಿ ಸುತ್ತೋಲೆ ಹೊರಡಿಸಿ ಗ್ರಾಮಠಾಣಾ ಪುನರ್ ನಿಗದಿಗೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಅಲ್ಲದೇ ಕೇಂದ್ರ ಸರಕಾರ ರಾಜ್ಯದ ಗ್ರಾಮಗಳ ಜನವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸುವ ಉದ್ದೇಶದಿಂದ ಸ್ವಾಮಿತ್ವ ಯೋಜನೆ ಜಾರಿಗೊಳಿಸಿದೆ.
ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಜಮೀನು ಸ್ಥಿತಿಯಂತೆ ಗ್ರಾಮಠಾಣ, ವಿಸ್ತೃತ ಗ್ರಾಮಠಾಣ ಅಥವಾ 10ಕ್ಕಿಂತ ಹೆಚ್ಚಿನ ಮನೆಗಳಿರುವ ಜನವಸತಿ ಪ್ರದೇಶಗಳ ಅಳತೆ ಮಾಡಿ, ಆಸ್ತಿಗಳಿಗೆ ಹಕ್ಕು ದಾಖಲೆ ವಿತರಿಸಲಾಗುತ್ತಿದೆ.
ಈಗಾಗಲೇ ಸ್ವಮಿತ್ವ ಯೋಜನೆಯಡಿ 3,191 ಗ್ರಾಮಗಳನ್ನು ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 2,467 ಗ್ರಾಮಗಳಿಗೆ ಶಾಶ್ವತ ದಾಖಲೆ ಕಾರ್ಡ್ಗಳನ್ನು ನೀಡಲಾಗಿದೆ. ಉಳಿದ ಗ್ರಾಮಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಡ್ರೋನ್ ಯಂತ್ರೋಪಕರಣಗಳು ಬಂದ ಅನಂತರ ಈ ವ್ಯವಸ್ಥೆಗೆ ಮತ್ತಷ್ಟು ವೇಗ ಸಿಗಲಿದೆ. ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡ್ರೋನ್ ಪರಿಕರ ಖರೀದಿಗೆ ಅನುಮೋದನೆ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.