ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ
Team Udayavani, Oct 22, 2021, 7:10 AM IST
ಬೆಂಗಳೂರು: ಚುನಾವಣ ಪ್ರಚಾರದ ವೇಳೆ ಪ್ರತಿಸ್ಪರ್ಧಿ ಪಕ್ಷಗಳ ನಾಯಕರ ವಿರುದ್ಧ “ಆಕ್ರಮಣಕಾರಿ ಮತ್ತು ಆಕ್ಷೇಪಾರ್ಹ’ ಭಾಷೆ ಬಳಸದಂತೆ ಎಲ್ಲ ರಾಜಕೀಯ ನಾಯಕ ರಿಗೆ ಸೂಚಿಸಿರುವ ಚುನಾವಣ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದೆ.
ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣ ಪ್ರಚಾರದ ವೇಳೆ ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿ ಭಾಷೆ ಬಳಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿ ಗಳನ್ನು ಆಧರಿಸಿ ಕೇಂದ್ರ ಚುನಾವಣ ಆಯೋಗದ ಮಾರ್ಗಸೂಚಿಗಳನ್ನು ಉಲ್ಲೇ ಖೀಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಅ. 21ರಂದು ಸೂಚನೆ ಹೊರಡಿಸಿದ್ದಾರೆ.
“ಮಾದರಿ ನೀತಿ ಸಂಹಿತೆ’ ಜಾರಿಯಲ್ಲಿರು ವಾಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿ ಗಳ ನಡವಳಿಕೆ ಹೇಗಿರಬೇಕು ಎಂದು ಕೇಂದ್ರ ಚುನಾವಣ ಆಯೋಗ ಮಾರ್ಗಸೂಚಿಗಳನ್ನು ರೂಪಿಸಿದೆ. ಇವುಗಳನ್ನು ಪಕ್ಷಗಳು ಮತ್ತು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ಆಯೋಗದ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದು ಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.