ಮೂಲಸೌಕರ್ಯಕ್ಕೆ ಆಗ್ರಹಿಸಿ ಚುನಾವಣಾ ಸಿಬ್ಬಂದಿ ಪ್ರತಿಭಟನೆ
Team Udayavani, May 12, 2018, 6:00 AM IST
ಬೆಂಗಳೂರು: ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಖಂಡಿಸಿ ರಾಜ್ಯದ ಕೆಲವೆಡೆ ಶುಕ್ರವಾರ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪುರ್ವ ಕಾಲೇಜಿನಲ್ಲಿರುವ ಮಸ್ಟರಿಂಗ್- ಡಿಮ ಸ್ಪರಿಂಗ್ ಕೇಂದ್ರದಲ್ಲಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಆಯೋಗ ಉಪಹಾರ ಮತ್ತು ಕುಡಿಯುವ ನೀರು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಆಕ್ರೋಶಗೊಂಡು, ಪ್ರತಿಭಟನೆ ನಡೆಸಿದರು. ಚುನಾವಣೆಗೆ ನಿಯೋಜನೆಗೊಂಡಿರುವ ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇರೆ ಸ್ಥಳಗಳಿಗೆ ತೆರಳಲು ಚುನಾವಣಾ ಇಲಾಖೆಯ ಆದೇಶದಂತೆ ಬೆಳಗ್ಗೆ 6 ಗಂಟೆಗೆ ಆಗಮಿಸಿದ್ದರು. ಆದರೆ, ಸಿಬ್ಬಂದಿಗೆ ಸಮರ್ಪಕವಾಗಿ ಬೆಳಗಿನ ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದೇ ವೇಳೆ, ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿನ ಮಸ್ಟರಿಂಗ್ ಕೇಂದ್ರದಲ್ಲಿಯೂ ಅವ್ಯವಸ್ಥೆಯ ವಿರುದ್ಧ ಚುನಾವಣಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಚುನಾವಣೆ ಸಿಬ್ಬಂದಿ ಶುಕ್ರವಾರ ಊಟ, ನೀರಿಲ್ಲದ್ದರಿಂದ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಳಗ್ಗೆ 6 ಗಂಟೆಗೆ ವರದಿ ಮಾಡಿಕೊಳ್ಳುವಂತೆ ಚುನಾವಣಾ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಸೂಚನೆಯಂತೆ ಸಿಬ್ಬಂದಿ ಇಲ್ಲಿನ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಬೆಳಗ್ಗಿನಿಂದಲೇ ಕರ್ತವ್ಯದಲ್ಲಿ ನಿರತರಾಗಿದ್ದರು. ಆದರೆ, ಉಪಾಹಾರದ ವ್ಯವಸ್ಥೆ ಮಾಡಿಲ್ಲ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳ ಉತ್ತರದಿಂದ ಆಕ್ರೋಶಗೊಂಡ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ದಿಢೀರ್ ಪ್ರತಿಭಟನೆಗೆ ಮುಂದಾದರು.