“ಕೈ”ನಿಂದ ನಾರಾಯಣ ಸ್ವಾಮಿಗೆ ಗೇಟ್ ಪಾಸ್;ಬಂಧನಕ್ಕೆ 4 ತಂಡ
Team Udayavani, Feb 20, 2018, 4:13 PM IST
ಬೆಂಗಳೂರು: ಹೊರಮಾವು ಬಿಬಿಎಂಪಿ ಕಂದಾಯ ಕಚೇರಿಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದ ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಬಿಬಿಎಂಪಿ ಕಂದಾಯ ಕಚೇರಿಗೆ ನುಗ್ಗಿದ್ದ ಶಾಸಕ ಭೈರತಿ ಬಸವರಾಜ ಆಪ್ತ ನಾರಾಯಣಸ್ವಾಮಿ ಅಧಿಕಾರಿಗೆ ಧಮ್ಕಿ ಹಾಕಿದ್ದಲ್ಲದೆ, ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯೊಡ್ಡಿರುವ ಘಟನೆ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೂಡಲೇ ಆತನನ್ನು ಒದ್ದು ಒಳಗೆ ಹಾಕಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದರು.
ಬಿಡಬ್ಲ್ಯುಎಸ್ ಎಸ್ ಬಿ ಸದಸ್ಯ ಸ್ಥಾನದಿಂದಲೂ ನಾರಾಯಣ ಸ್ವಾಮಿಯನ್ನು ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ನಾರಾಯಣಸ್ವಾಮಿ ನಾಪತ್ತೆ, ಬಂಧನಕ್ಕೆ ನಾಲ್ಕು ತಂಡ:
ಬಿಬಿಎಂಪಿ ಕಂದಾಯ ಅಧಿಕಾರಿ ಮೇಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಎಫ್ಐಆರ್ ದಾಖಲಾಗಿದೆ.
ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 353,427, 341, 504, 506ರ ಅಡಿ ಪ್ರಕರಣ ದಾಖಲಿಸಲಾಗಿದೆ. ನಾರಾಯಣಸ್ವಾಮಿ ಬಂಧನಕ್ಕೆ ಪೂರ್ವ ವಿಭಾಗ ಡಿಸಿಪಿ ಅಜಯ್ ಹಿಲೋರಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ವರದಿ ತಿಳಿಸಿದೆ.