ಮಾಜಿ ಸಚಿವ ವೈಜನಾಥ ಪಾಟೀಲ್ ಅಂತ್ಯಕ್ರಿಯೆ
Team Udayavani, Nov 4, 2019, 3:02 AM IST
ಕಲಬುರಗಿ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದ ಮಾಜಿ ಸಚಿವ, 371ನೇ (ಜೆ) ವಿಧಿ ಜಾರಿ ಹೋರಾಟಗಾರ ವೈಜನಾಥ್ ಪಾಟೀಲ ಅಂತ್ಯಕ್ರಿಯೆ ಭಾನುವಾರ ಸಂಜೆ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಿಂಚೋಳಿ-ತಾಂಡೂರ ಮುಖ್ಯರಸ್ತೆಯ ಕಲ್ಯಾಣ ಮಂಟಪದ ಆವರಣದಲ್ಲಿ ನೆರವೇರಿತು.
ಬಸವಕಲ್ಯಾಣ ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ, ಹಾರಕೂಡದ ಡಾ.ಚೆನ್ನವೀರ ಶಿವಾಚಾರ್ಯ ಹಾಗೂ ಇತರ ಸ್ವಾಮೀಜಿಗಳ ಸಮ್ಮುಖದಲ್ಲಿ ವಚನ ಪಠಣ ಹಾಗೂ ಇತರ ಧಾರ್ಮಿಕ ಕಾರ್ಯಗಳೊಂದಿಗೆ ಹಾಗೂ ಸರ್ಕಾರಿ ಸಕಲ ಗೌರವ ಗೌರವದೊಂದಿಗೆ ನಡೆಯಿತು. ಪಾರ್ಥಿವ ಶರೀರದ ಮೆರವಣಿಗೆ ಭಾನುವಾರ ಬೆಳಗ್ಗೆ ಪಟ್ಟಣದಲ್ಲಿರುವ ಮನೆಯಿಂದ ಮುಖ್ಯ ರಸ್ತೆ, ಬಸ್ ನಿಲ್ದಾಣದ ಮುಖಾಂತರ ಕಲ್ಯಾಣ ಮಂಟಪಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಮಠಾಧೀಶರು, ರಾಜಕೀಯ ಗಣ್ಯರು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಅಂಗಡಿ-ಮುಂಗಟ್ಟು ಬಂದ್: ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ವೈಜನಾಥರಿಗೆ ನಮನ ಸಲ್ಲಿಸಲಾಯಿತು. ಸಚಿವ ಪ್ರಭು ಚೌವ್ಹಾಣ, ಅಖೀಲ ಭಾರತ ವೀರಶೈವ ಮಹಾಸಭಾ ಹಿಂದಿನ ಅಧ್ಯಕ್ಷ ಭೀಮಣ್ಣ ಖಂಡ್ರೆ, ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ, ಮಾಜಿ ಸಚಿವ ಎಸ್.ಕೆ.ಕಾಂತಾ, ರಾಜಶೇಖರ ಪಾಟೀಲ ಹುಮನಾ ಬಾದ, ಎಂ.ವೈ.ಪಾಟೀಲ, ಡಾ.ಅಜಯಸಿಂಗ್, ತಿಪ್ಪಣ್ಣಪ್ಪ ಕಮಕನೂರ ಹಾಗೂ ಇತರರು ಹಾಜರಿದ್ದರು.