ಗೌರಿ ಹಂತಕರ ವಿರುದ್ಧ ಕೋಕಾ ಕಾಯ್ದೆ
Team Udayavani, Aug 15, 2018, 6:00 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್ಐಟಿ) ಬಂಧಿತ 12 ಆರೋಪಿಗಳ ವಿರುದ್ಧ “ಕೋಕಾ’ ಕಾಯ್ದೆ ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಮದ್ದೂರಿನ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಶಿಕಾರಿಪುರದ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದ್ವೇಗ್ವೇಕರ್, ವಿಜಯಪುರದ ಮನೋಹರ್ ಯಡವೆ, ಪರಶುರಾಮ್ ವಾಗ್ಮೋರೆ, ಮೋಹನ್ ನಾಯಕ್, ರಾಜೇಶ್ ಬಂಗೇರಾ, ಸುರೇಶ್ ಹಾಗೂ ಭರತ್ ಕುರ್ನೆ ವಿರುದ್ಧ ಕೋಕಾ ಕಾಯ್ದೆ ಅಡಿ ಹೆಚ್ಚುವರಿ ಸೆಕ್ಷನ್ ಹಾಕಿಕೊಂಡು ತನಿಖೆ ಮುಂದುವರಿಸಿದೆ ಎಂದು
ತನಿಖಾಧಿಕಾರಿ ಅನುಚೇತ್ ತಿಳಿಸಿದರು.
ಸದ್ಯ ಆರೋಪಿಗಳ ವಿರುದ್ಧ ಐಪಿಸಿ 302, 114, 118, 120 (ಬಿ), 35 ಐಪಿಸಿ ಹಾಗೂ ಆಮ್ಸ್ì ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಸಂಘಟಿತ ರೀತಿಯಲ್ಲಿ ಅಪರಾಧ ಕೃತ್ಯ ಎಸಗಿದ್ದಾರೆ. ಹೀಗಾಗಿ, ಎಲ್ಲ ಆರೋಪಿಗಳ ವಿರುದಟಛಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಪೊಲೀಸರಿಗೆ 90 ದಿನಕ್ಕೆ ಸಲ್ಲಿಸುವ ಚಾರ್ಜ್ಶೀಟ್ನ್ನು 180 ದಿನದೊಳಗೆ ಸಲ್ಲಿಸಲು ಸಮಯ ಇರುತ್ತದೆ.
ಆರೋಪಿಗಳನ್ನು 14 ದಿನಗಳ ಬದಲಿಗೆ 30 ದಿನದವರೆಗೆ ಪೊಲೀಸ್ ವಶಕ್ಕೆ ಪಡೆಯಲು ಅವಕಾಶ ಇರುತ್ತದೆ. ಜತೆಗೆ, ಆರೋಪಿಗಳಿಗೆ ಕನಿಷ್ಠ 5
ವರ್ಷದಿಂದ ಗರಿಷ್ಠ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸಬಹುದು. ಒಂದು ಲಕ್ಷದಿಂದ 5 ಲಕ್ಷ ದಂಡ ವಿಧಿಸಬಹುದು. ಈ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆ
ಹಾಕಿದ್ದು, ಇನ್ಮುಂದೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.