ಇನ್ನೂ ಮುಗಿಯದ ಮಳೆ: ಮಳೆ ಸಂಬಂಧಿ ಅವಘಡಗಳಲ್ಲಿ 9 ಮಂದಿ ಸಾವು
Team Udayavani, Sep 7, 2022, 6:40 AM IST
ಹುಬ್ಬಳ್ಳಿ/ಬೆಂಗಳೂರು: ರಾಜ್ಯದ ಹಲವೆಡೆ ಮಂಗಳವಾರವೂ ವರುಣ ಅಬ್ಬರಿಸಿದ್ದಾನೆ. ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಪರಿ ಸ್ಥಿತಿ ಉಂಟಾಗಿದ್ದು, ಇನ್ನೂ 5 ದಿನ ರಾಜ್ಯಾ ದ್ಯಂತ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ಮತ್ತಷ್ಟು ಆತಂಕಕ್ಕೀಡಾಗಿದೆ.
ಕೃಷ್ಣಾ, ಮಲಪ್ರಭಾ, ತುಂಗಭದ್ರಾ ಸೇರಿದಂತೆ ಪ್ರಮುಖ ನದಿ ಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಸಂಪರ್ಕ ಕಡಿತ ಗೊಂಡಿದ್ದು, ಮಳೆ ಅನಾಹುತಕ್ಕೆ 9 ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರಗಿ, ಬಳ್ಳಾರಿಜಿಲ್ಲೆಗಳಲ್ಲಿ ಮಳೆಯ ಕಾರಣದಿಂದಅಪಾರ ಪ್ರಮಾಣದ ಹಾನಿಯುಂಟಾಗಿದೆ. ಗದಗ ಜಿಲ್ಲೆಯಲ್ಲಿ 3, ಬಾಗಲಕೋಟೆಯಲ್ಲಿ 2, ಹಾವೇರಿ, ಶಿವಮೊಗ್ಗ, ಚಾಮರಾಜನಗರ, ಬೆಂಗಳೂರಿನಲ್ಲಿ ತಲಾ ಓರ್ವರು ಸಾವಿಗೀಡಾಗಿದ್ದಾರೆ.
ರಾಜಧಾನಿಯ ಹಲವೆಡೆ ಮಳೆ ಸುರಿಯುತ್ತಿರುವುದರಿಂದ 141 ಕೆರೆಗಳು ಭರ್ತಿಯಾಗಿದ್ದು ಮತ್ತಷ್ಟು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ. ಇದರ ಮಧ್ಯೆ ಮಳೆಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಐಟಿ, ಬಿಟಿ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಸಂಜೆ ನಾನಾ ಸಾಫ್ಟ್ ವೇರ್ ಕಂಪೆನಿಗಳ ಮುಖ್ಯಸ್ಥರ ಸಭೆ ಕರೆದಿದ್ದಾರೆ.