ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
Team Udayavani, Aug 2, 2022, 10:08 PM IST
ಬೆಂಗಳೂರು: ಛತ್ತೀಸ್ಗಡದಿಂದ ದಕ್ಷಿಣಕ್ಕೆ ತಗ್ಗಿದ ಮೇಲ್ಮೈ ಸುಳಿಗಾಳಿ (ಟ್ರಪ್) ಬರುತ್ತಿರುವುದು, ತಮಿಳುನಾಡಿನಿಂದ ಬಂಗಾಳಕೊಲ್ಲಿ ಕಡೆಗೆ ಆಂಧ್ರ ಕರಾವಳಿ ಮೂಲಕ ಮೇಲ್ಮೈ ಸುಳಿಗಾಳಿ ಬೀಸುತ್ತಿರುವುದು ಮತ್ತು ದಕ್ಷಿಣ ದ್ವೀಪದಲ್ಲಿ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಲ್ಲಿ ಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ಮುಂದಿನ 4ರಿಂದ 5 ದಿನಗಳವರೆಗೂ ಭರ್ಜರಿ ಮಳೆಯಾಗಲಿದೆ. ಆ.3ರಿಂದ 4 ದಿನ ಕರಾವಳಿ ಜಿಲ್ಲೆಗಳು ಹಾಗೂ ಆ.4ರಿಂದ 3 ದಿನ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಿದೆ. ಗಂಟೆಗೆ 30ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಶಿರಾಲಿಯಲ್ಲಿ 29 ಸೆಂ.ಮೀ. ಮಳೆ: ರಾಜ್ಯಾದ್ಯಂತ ಸೋಮವಾರ ಭರ್ಜರಿ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ 29 ಸೆಂ.ಮೀ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ 22 ಸೆಂ.ಮೀ. ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ 14, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ 13 ಸೆಂ.ಮೀ. ಮಳೆಯಾಗಿದೆ. ರಾಜ್ಯಾದ್ಯಂತ ಮುಂಗಾರು ತೀವ್ರವಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಕ್ಕಿಲ್ಲ ಪರಿಣಾಮ: ಮುಂದಿನ 4 ನಾಲ್ಕು ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಒಂದು ವೇಳೆ ವಾಯುಭಾರ ಕುಸಿತವಾದರೂ ರಾಜ್ಯಕ್ಕೆ ಯಾವುದೇ ಪರಿಣಾಮವಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.