ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್: ಮಾಹಿತಿ ಕೇಳಿದ ಹೈಕೋರ್ಟ್
Team Udayavani, Aug 15, 2019, 3:04 AM IST
ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲ ಬಗೆಯ ವಾಹನಗಳಿಗೆ “ಗರಿಷ್ಠ ಭದ್ರತೆ’ಯ (ಹೈ ಸೆಕ್ಯೂರಿಟಿ) ನಂಬರ್ ಪ್ಲೇಟ್ ಅಳವಡಿಸುವ ವಿಚಾರ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ 4 ವಾರದಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಹೈಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪು ನೀಡಿ, ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ, ಕರ್ನಾಟಕದಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಮೋಟಾರು ವಾಹನ ಕಾಯ್ದೆ-1989’ರ ಸೆಕ್ಷನ್ 50 ಮತ್ತು 51ರಂತೆ ಎಲ್ಲ ವಾಹನಗಳಿಗೆ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ ಭದ್ರತೆಯ (ಹೈ ಸೆಕ್ಯೂರಿಟಿ) ನಂಬರ್ ಪ್ಲೇಟ್ಗಳನ್ನು ಅಳವಡಿಸಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ 2018ರಲ್ಲಿ ನಿಯಮಗಳನ್ನು ಹೊರಡಿಸಿದೆ. ಮೇಲಾಗಿ ಕೇಂದ್ರ ಸರ್ಕಾರ ಸಹ ಆದೇಶ ಹೊರಡಿಸಿದೆ.
ಎಲ್ಲ ರಾಜ್ಯಗಳಲ್ಲಿ 2019ರ ಏ.1ರಿಂದ “ಎಚ್ಎಸ್ಆರ್ಪಿ’ (ಗರಿಷ್ಠ ಭದ್ರತೆಯ ನೋಂದಣಿ ಫಲಕ) ಜಾರಿಗೆ ಬಂದಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಇನ್ನೂ ಅದು ಜಾರಿಯಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ, ಇದೊಂದು ಗಂಭೀರ ವಿಚಾರ. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಬೇಕು ಮತ್ತು ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ನ್ಯಾಯಪೀಠ ವಿಚಾರಣೆ ಮುಂದೂಡಿತು.