ಮೊಬೈಲ್ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್
Team Udayavani, Jul 27, 2021, 10:57 PM IST
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಇಬ್ಬರು ಆರೋಪಿಗಳು ಜೈಲಿನಿಂದಲೇ ಆನ್ಲೈನ್ ಮೂಲಕ ಕೋರ್ಟ್ ಕಲಾಪ ವೀಕ್ಷಣೆ ಮಾಡಿದ್ದಕ್ಕೆ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದ್ದು ಬುಧವಾರ ವಿವರಣೆ ನೀಡುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದೆ.
ಎನ್ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ನ್ಯಾ| ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸುತ್ತಿತ್ತು.
ಪ್ರಕರಣದ ಆರೋಪಿಗಳಾದ ಶೇಕ್ ಮೊಹಮ್ಮದ್ ಬಿಲಾಲ್ ಹಾಗೂ ಮೊಹಮ್ಮದ್ ಶರೀಫ್ ವೀಡಿಯೋ ಕಾನ್ಫರೆನ್ಸ್ ಲಿಂಕ್ ಬಳಸಿ ಜೈಲಿನಿಂದಲೇ ಮೊಬೆಲ್ನಲ್ಲಿ ಕಲಾಪ ವೀಕ್ಷಣೆ ಮಾಡುತ್ತಿರುವ ಸ್ಕ್ರೀನ್ ಶಾಟ್ ಅನ್ನು ಎನ್ಐಎ ಪರ ವಕೀಲ ಪಿ. ಪ್ರಸನ್ನಕುಮಾರ್ ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಗಮನಿಸಿದ ನ್ಯಾಯಪೀಠ, ಆರೋಪಿಗಳ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿತಲ್ಲದೇ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಸಿಕ್ಕಿದ್ದು ಹೇಗೆ ಎಂಬ ಕುರಿತು ಬುಧವಾರ ಅಡ್ವೋಕೇಟ್ ಜನರಲ್ ಅವರು ವಿವರಣೆ ನೀಡಬೇಕು ಎಂದು ಸರಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.